Thursday, July 5, 2018

ಹೀಗೊಂದು ನಲ್ಲೆಯ ಕಾಲ್ಪನಿಕ ಪತ್ರ

ಕಾಣದೂರಿಗೆ ಹೋಗಿರುವ ನನ್ನ ಪ್ರೀತಿಯೇ,

ನಿನ್ನ ಮೇಲೆ ನಂಗೆ ಕೋಪವಿದೆ. ನಿನ್ನ ಬಾಹು-ಬಂಧನದಲ್ಲಿದ್ದು ಹೇಳಬೇಕೆಂದಿದ್ದ ವಿಷಯಗಳನ್ನು ಪತ್ರದಲ್ಲಿ ಹೇಳುವಂತೆ ಮಾಡಿದಕ್ಕೆ.

ಕಾಲೇಜಿನಲ್ಲಿ ನೋಡಿದ ಮೊದಲ ದಿನವೇ ನನ್ನಲ್ಲಿ ನೀನು ಭಯ ಹುಟ್ಟಿಸಿದ್ದೆ. ನೀನು ಬರುತ್ತಿರುವ ದಾರಿಯಲ್ಲಿ ಬರಲು ಸಹ ನಡುಗುವಷ್ಟು ಅಂಜಿಕೆ. ನಿನ್ನಾ ದಿಟ್ಟ ಕಣ್ಣುಗಳು ಎಂತವರನ್ನೂ ದಿಗಿಲುಗೊಳಿಸುತ್ತಿತ್ತು. ಇನ್ನು ನಾನ್ಯಾವ ಲೆಕ್ಕ? ನಿನ್ನಾ ಕಣ್ಣು ನನ್ನ ಕಣ್ಗಳೊಡನೆ ಮೊದಲ ಸಲ ಬೆರೆತಾಗ ನನ್ನ ಉಸಿರು ಒಮ್ಮೆ ಮರೆತು ನಿಂತಿದ್ದು ಮಾತ್ರ ಸುಳ್ಳಲ್ಲ. ನಿನ್ನೊಡನೆ ಮಾತನಾಡಿದಾಗಲೇ ಅರಿವಾಗಿದ್ದು, ನಿನ್ನೊಳಗೊಬ್ಬ 'ಮುದ್ದು' ಅಡಗಿದ್ದಾನೆ  ಎಂದು. ಆ ಮುದ್ದುವಿಗೆ ಬಿದ್ದವಳು ನಾನು. ಆದರೂ ನಿನ್ನಲ್ಲಿ ಬಿನ್ನವಿಸಲು ಏನೋ ಭಯ. ನಿನ್ನ ಪಡೆಯೋ ಪ್ರಯತ್ನವೆಲ್ಲಿ ವಿಫಲವಾಗುವುದೋ ಎಂದು. ನಿನ್ನಲ್ಲೂ ನನ್ನೆಡಗಿನ ಪ್ರೀತಿ ಅಭಿವ್ಯಕ್ತಗೊಳ್ಳುತ್ತಿದ್ದರೂ, ಅದೇನೋ ಹೆಣ್ಣಿನಲ್ಲಿರುವ ಸಹಜ ಅಧೈರ್ಯ ನನ್ನಲಿ. ನಿನ್ನ ಮನಸ್ಸು ಭಾವ  ಭಾರ ತಾಳಲಾರದೆ ಪ್ರೀತಿ ಪ್ರಸ್ತಾಪವಿತ್ತಾಗಲೂ, ನಾಚಿಕೆಯ ಮೌನದೊಂದಿಗಿನ ನಗುವನ್ನೇ ಹೊತ್ತು ನಾನು ನಿಂತಿದ್ದೆ. ನಿಜವಾಗಲೂ, ಮನದ ಕಡಲು ಅಂದು ಬೆಳದಿಂಗಳು ಸಿಕ್ಕಷ್ಟು  ಭೋರ್ಗೆರೆಯುತಿತ್ತು. ಆದರೆ, ಆ ಪ್ರೀತಿಯ ಭೋರ್ಗೆರೆತ ನಿನ್ನ ತೋಯ್ದು ತಣಿಸುವಷ್ಟರಲ್ಲೇ, ನೀ ನನ್ನ ಕಣ್ಣೀರಲ್ಲಿ ನಿಲ್ಲಿಸಿ, ಕಣ್ಮರೆಯಾದೆ.

ಅಂದು ಜನ್ಮವಾದ ನನ್ನ ನೋವಿಗೆ ೫೦ ವರ್ಷ ಪ್ರಾಯವಾದಂತಹ ಭಾವ. ಕಣ್ಣೀರು-ಕೊನೆಯುಸಿರು ಎರಡು ಒಂಟಿ ಹಕ್ಕಿಗಳಂತೆ. ಒಂದು ಹಕ್ಕಿ ನನ್ನೊಳಗೆ ಹೊಕ್ಕಿ ಕುಳಿತಿದ್ದರೆ, ಇನ್ನೊಂದು ನಿನ್ನೊಂದಿಗೆ ಲೀನವಾಗಿತ್ತು. ನಿಂತ ನೆಲ ಕದಲಿ ಕುಸಿದು ಹೋಗಿತ್ತು. ಬರಿಯ ಕತ್ತಲೆಗೆ ಹೆದರುವ ನಾ, ಇಡೀ ಜೀವನ ನಿನ್ನ ಕಣ್ಗಳ ಬೆಳಕಿನಡಿಯಲ್ಲೇ ಬದುಕಬೇಕೆಂದಿದ್ದೆ. ಆದರೆ, ನೀನೇ ನೆರಳಿಗೆ ಸರಿದು ಬಿಟ್ಟೆ. ಎಂದೂ ನನ್ನ ಬಿಟ್ಟಿರೋಲ್ಲ ಎಂದವನು ಯಾಕೆ ಹೀಗೆ ಹೇಳದೇ ಹೊರಟು ಹೋದೆ? ಮುತ್ತು-ಮೋಹಗಳಾಚೆ ಬೆಳೆದಿದ್ದ ನಮ್ಮ ಅನನ್ಯ ಪ್ರೀತಿಗೆ ಜಗತ್ತಿನ ಕಣ್ಣು ಬಿದ್ದಿದ್ದರೆ ಅದಕ್ಕೊಂದು ಹಿಡಿ ಶಾಪ ನನ್ನದು ಯಾವತ್ತಿಗೂ ಇದೆ.

ಕಳೆದೆನಾ ನಿನ್ನಾ?
ಮುಳುಗಿ ಹೋದ ಬೆಳಕ ಹುಡುಕುತಾ
ಕತ್ತಲೆಯಲಿ ಕೈ ಚಾಚಿದೆನಾ?
ಕದಲಿ ಹೋದ ನಿಂತ ನೆಲದಿ
ನಡುಗದೆಯೇ ನಿಲ್ಲುವೆನಾ?
ಎನಿತು ಪ್ರೆಶ್ನೆಗಳ ಸೆರೆಯು?
ಎನಿತು ಮೌನ ಮನದ ಒಳಗೊಳಗೇ ಬರ ಸಿಡಿಲು?
ನೋವ ಹಾದಿಯಲಿ ನಗುವ ಹುಡುಕಾಟವೇತಕೆ ಈ ಪರಿಯು?

ನೀನಿರದ ಬದುಕಿನ ಕಲ್ಪನೆಯು ನನಗಿರಲಿಲ್ಲ. ನೀನೊಬ್ಬನಿರದ ಈಗ, ಜಗತ್ತಿನಲ್ಲಿ ಮತ್ಯಾರು ಇಲ್ಲದೆ ನನ್ನೊಂದಿಗೆ ನೀನೊಬ್ಬನೇ ಇರುವಂತೆ ಭಾವಿಸುತ್ತದೆ. ಇಲ್ಲ ಇಲ್ಲ. ನೀನಲ್ಲದೆ ನನ್ನೊಂದಿಗೆ ಇನ್ನೊಬ್ಬನಿರುತ್ತಾನೆ. ಅವನೇ ನನ್ನ ಕಣ್ಣೀರು. ನನಗಿಂತ ಹೆಚ್ಚು ನನ್ನ ಕಂಬನಿಯೇ ನಿನ್ನ ಇಷ್ಟಪಡುತ್ತೆ ಅನ್ನಿಸೊತ್ತೆ ಕಣೋ. ಏಕೆಂದರೆ, ನಿನ್ನ ನೆನೆದಾಗಲೆಲ್ಲಾ, ನಿನ್ನ ನೆನಪನ್ನ ನೋಡೋಕೆ ತಂತಾನೇ ಕಂಬನಿಯೂ ಸಹ ಜೊತೆ ಬರುತ್ತಾನೆ.

ಉದ್ದುದ್ದ ಗೀಚಿದರೆ ಮುಗಿಯದು
ಮುದ್ದು ಮನದ ಆಳದಿ ಹೊಕ್ಕಿ ಕೂತಾ ಕದನ,
ಎಷ್ಟು ಸಾಲುಗಳಾದರೇನು? ಕವನಗಳ ಹುಚ್ಚೆದ್ದರೇನು?
ವ್ಯಕ್ತವಾಗುವುದೇ? ವ್ಯಕ್ತವು ವ್ಯರ್ಥವಾಗುವುದೇ?
ತಲ್ಲಣಿಸಿದೆ ಮನ. 

ನೀ ನನ್ನಿಂದ ದೂರವಾಗೋ ಕೆಟ್ಟ ಕನಸು ಬಂದಾಗಲೆಲ್ಲಾ ಬೆವರಿ-ಬೆದರಿ ಎಚ್ಚರಗೊಳ್ಳುತ್ತೇನೆ. ಎದ್ದ ಮೇಲೆ ಕನಸಲ್ಲಾದರೂ ಒಂದು ಕ್ಷಣ ನೀನು ಬಂದು ಹೋದೆಯೆಂಬ ಸಮಾಧಾನ ಉಳಿದುಕೊಳ್ಳುತ್ತದೆ. ಪ್ರತಿ ಬಾರಿ ಬಿಕ್ಕಳಿಕೆ ಬಂದಾಗ ನೀನು ನೆನೆಸಿಕೊಳ್ಳುತ್ತಿದ್ದೀಯ ಅಂತ ಮನಸು ಹೇಳಿಕೊಳ್ಳೊತ್ತೆ. ಆಗ ನೀನಿದ್ದಾಗ ಒಂಟಿತನದ ಸುಳಿವಿರುತ್ತಿರಲಿಲ್ಲ. ಆದರೆ, ಈಗ ನನ್ನ ಒಂಟಿತನದ ಜೊತೆಗಾರ ನೀನೆ.

ಕಡಲು ತಿರುತಿರುಗಿ ತೀರದೆಡೆ ಬರುವಂತೆ ನನ್ನೆಲ್ಲಾ ಭಾವಗಳೂ ನಿನ್ನ ಕಡೆಗೇ ಧಾವಿಸುತ್ತವೆ. ನೀನೆಲ್ಲಿದ್ದರೂ ನನ್ನವನೇ. ನಿನ್ನೊಡನೆಯ ನನ್ನೀ ಜೀವನದಿಂದ ನಿನ್ನ ಬೇರ್ಪಡಿಸಲು ಯಾರಿಗೂ ಸಾಧ್ಯವಿಲ್ಲ. ನಿನ್ನೊಂದಿಗೆ ನಾನಿದ್ದ ಪ್ರತಿ ಕ್ಷಣಗಳನ್ನು ಜೀವನಾದ್ಯಂತ ಅನುಭವಿಸುವೆ. ಆದರೆ, ನಿನ್ನ ಮುಂದೆ ಕುಳಿತು, ನನ್ನ ಬೆರಳ ನಡುವೆ ನಿನ್ನ ಬೆರೆಳುಗಳ ಸೇರಿಸಿ, ಒಬ್ಬರನ್ನೊಬ್ಬರು ನೋಡುತ್ತಾ, ಮೌನದಲ್ಲೇ ಮಾತನಾಡುವ ಆಸೆಯೊಂದಿದೆ, ಎಂದು ಬರುವೆ ಹೇಳು?


ನಿನ್ನೇ ಕಾದು ಕುಳಿತಿರುವ ಮನಸು...       

No comments:

Post a Comment

ಕಾದು ನೋಡಿ

ಹೊಸ ಅಂಕಣ...

"ತೀರ"


ಆತ್ಮೀಯ ಒಡನಾಡಿಗಳೇ,


೨೦೧೦-೨೦೧೧ ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವಿಶೇಷವಾಗಿ ಮಾಡಲ್ಪಟ್ಟ "ತೀರ" ಎಂಬ ವೀಡಿಯೋ ತುಣುಕನ್ನು ಈ ಮೂಲಕ ನಮ್ಮ ಬ್ಲಾಗ್ ನಲ್ಲಿ upload ಮಾಡುತ್ತಿದ್ದೇವೆ. ನಮ್ಮ ವಿಭಾಗದಲ್ಲಿನ ದಿನಗಳ ನೆನಪನ್ನ ಮತ್ತೆ ನಿಮ್ಮಲ್ಲಿಗೆ ತರುವಂತಹ ಒಂದು ಪುಟ್ಟ ಪ್ರಯತ್ನವು ಇದಾಗಿದ್ದು, ನಿಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ನಂಬಿದ್ದೇವೆ.


ನಿಮ್ಮ ಪ್ರತಿಯೊಂದು ಅನಿಸಿಕೆಗಳಿಗೂ ಆದರದ ಸ್ವಾಗತ.



ಈ ವೀಡಿಯೊ ತುಣುಕನ್ನು ತಯಾರಿಸಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೋರ್ವರಿಗೂ ಈ ಮೂಲಕ ಧನ್ಯವಾದವನ್ನು ಅರ್ಪಿಸುತ್ತೇವೆ.


- ರೋಹಿತ್

ತೀರ ಭಾಗ - 1

ತೀರ ಭಾಗ - 2

ತೀರ ಭಾಗ - 3

ನನ್ನ ಬೆರಳಿನೊಡನೆ ಆಡಿದ ಕನಯ್ಯ...

ನನ್ನ ಬೆರಳಿನೊಡನೆ ಆಡಿದ ಕನಯ್ಯ...