Friday, August 18, 2017

ಸ್ವಾತಂತ್ರ್ಯದ ಆಶಯ

ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. 

ನಾವು ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯದ ಹಕ್ಕುಗಳು ಅಸಂಖ್ಯಾತ ದೇಶಭಕ್ತರ ಬಲಿದಾನದಿಂದ ದೊರೆತಿರುವುದಾಗಿದೆ. ಅಂತಹ ಎಲ್ಲಾ ಮಹನೀಯರಾದ ಸ್ವಾತಂತ್ರ್ಯ ಹೋರಾಟಗಾರರು, ವೀರ ಯೋಧರು, ಕ್ರಾಂತಿಕಾರಿಗಳು ಮತ್ತು ಇತರ ಅನೇಕ ಹುತಾತ್ಮರನ್ನು ಇಂದು ಸ್ಮರಿಸಿ, ಅವರ ಕೊಡುಗೆಗಳಿಗೆ ವಿನಮ್ರ ವಂದನೆಗಳನ್ನು ಸಲ್ಲಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ. ವೈಜ್ಞಾನಿಕ ಪುರಾವೆಗಳ ಪ್ರಕಾರ ಭಾರತದಲ್ಲಿ ಸರಿಸುಮಾರು ೭೫ ಸಾವಿರ ವರ್ಷಗಳ ಹಿಂದಿನಿಂದ ಆಧುನಿಕ ಮಾನವನು, ಅಂದರೆ ಹೋಮೋ ಸೇಪಿಯೆನ್ಸ್ ವಾಸಿಸುತ್ತಿದ್ದಾನೆ. ಸಿಂಧೂ ಕಣಿವೆ ನಾಗರೀಕತೆಯ ತವರೂರಾದ ನಮ್ಮ ದೇಶದಲ್ಲಿ ಹಲವಾರು ಸಂಸ್ಕೃತಿ, ಭಾಷೆ ಮತ್ತು ಧರ್ಮಗಳು ಏಕತೆಯೊಂದಿಗೆ ಸಹಭಾಳ್ವೆಯನ್ನು ನಡೆಸುತ್ತಿವೆ. 

ಮೌರ್ಯರು, ದೆಹಲಿಯ ಸುಲ್ತಾನರು, ವಿಜಯನಗರ ಅರಸರು, ಮೊಘಲರು, ಮರಾಠರು ಹಾಗೂ ಸಿಖ್ ಸಾಮ್ರಾಜ್ಯಗಳು ಸೇರಿದಂತೆ ಹಲವಾರು ಸಾಮ್ರಾಜ್ಯಗಳು/ಸಂಸ್ಥಾನಗಳ ರಾಜರುಗಳ ಆಳ್ವಿಕೆಯಲ್ಲಿ ಸಮಗ್ರ ಭಾರತವು ಸಂಪನ್ಮೂಲಭರಿತ ರಾಷ್ಟ್ರವಾಗಿ ಬೆಳೆಯಿತು. ಈ ರೀತಿ ಸಮೃದ್ಧತೆಗೆ ಇನ್ನೊಂದು ಹೆಸರಾಗಿದ್ದ ಭಾರತಕ್ಕೆ ಯುರೋಪ್ ನಿಂದ ಸಮುದ್ರ ಮಾರ್ಗವನ್ನು ೧೪೯೮ರಲ್ಲಿ ವಾಸ್ಕೊಡಗಾಮ ಕಂಡುಹಿಡಿಯುವುದರೊಂದಿಗೆ ಭಾರತ ಹಾಗೂ ಯೂರೋಪಿನ ನಡುವೆ ವ್ಯಾಪಾರ ವಹಿವಾಟು ಪ್ರಾರಂಭಗೊಂಡಿತು. ಪೋರ್ಚುಗೀಸ್ ಮತ್ತು ಡಚ್ಚರ ನಂತರ ೧೬೦೦ ರ ವೇಳೆಗೆ ವ್ಯಾಪಾರದ ನೆಪ ಹೊತ್ತಿದ್ದ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯ ಆಗಮನದಿಂದ ನಮ್ಮ ದೇಶದಲ್ಲಿ ವಸಾಹತುಶಾಹಿ ಪರಿಸರ ನಿರ್ಮಾಣವಾಗತೊಡಗಿತು. ಬ್ರಿಟಿಷ್ ವ್ಯಾಪಾರಿಗಳು ಕ್ರಮೇಣ ಸೇನೆ ಹಾಗೂ ಆಡಳಿತ ಚುಕ್ಕಾಣಿ ಹಿಡಿಯಲು ಪ್ರಾರಂಭಿಸಿದರು ಹಾಗೂ ಇದನ್ನು ವಿರೋಧಿಸಿದ ಹಲವಾರು ರಾಜ್ಯ/ಸಂಸ್ಥಾನಗಳನ್ನು  ಬಲಿಷ್ಠ ಸೇನೆಯ ಮುಖಾಂತರ ಸೋಲಿಸಿ, ವಶಪಡಿಸಿಕೊಂಡರು. ೧೭೫೭ರ ಹೊತ್ತಿಗೆ ಭಾರತದ ಹಲವಾರು ಭಾಗಗಳು ಆಂಗ್ಲರ ಪಾಲಾಗಿತ್ತು. 

ಆಂಗ್ಲರ ದಬ್ಬಾಳಿಕೆ ಹಾಗೂ ಪಕ್ಷಪಾತಿ ಧೋರಣೆಯಿಂದ ಬೇಸತ್ತಿದ್ದ ಭಾರತೀಯರು ೧೮೫೭ ರಲ್ಲಿ ಬ್ರಿಟೀಷರ ಆಳ್ವಿಕೆಯ ವಿರುದ್ಧ ಹೋರಾಡಲು ಅಣಿಯಾದರು. ಇದು ಭಾರತದ ಸ್ವಾತಂತ್ರ್ಯ ಸಂಗ್ರಾಮವೆಂದೇ ಹೆಸರಾಯಿತು. ಈ ಸಂಗ್ರಾಮವು ನಮ್ಮ ದೇಶದ ಸ್ವಾತಂತ್ರ್ಯ ಚಳುವಳಿಗೆ ಮುನ್ನುಡಿಯನ್ನು ಬರೆಯಿತು. ಅಲ್ಲಿಂದ ಮುಂದೆ, ಆಂಗ್ಲರು ನಡೆಸಿದ ಜಲಿಯನ್ ವಾಲಾಬಾಗ್ ಸೇರಿದಂತೆ ಹಲವಾರು ಹತ್ಯಾಕಾಂಡಗಳು ಹಾಗೂ ಅವರ ನೀತಿರಚನೆಯಲ್ಲಿನ ತಪ್ಪುಗಳಿಂದ ಉಂಟಾದ ಭೀಕರ ಕ್ಷಾಮಗಳು ಭಾರತೀಯರನ್ನು ಬ್ರಿಟೀಷರ ವಿರುದ್ಧ ಒಗ್ಗೂಡಿಸಿ, ಸ್ವಾತಂತ್ರ್ಯ ಚಳುವಳಿಯನ್ನು ಬಲಪಡಿಸಿತು. ಮಹಾತ್ಮಾ ಗಾಂಧೀಯವರ ನೇತೃತ್ವದ ಶಾಂತಿಯುತ ಸತ್ಯಾಗ್ರಹ ಮತ್ತು ಅಸಹಕಾರಿ ಚಳುವಳಿಗಳ ಜೊತೆಯಲ್ಲಿ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸುಭಾಷ್ ಚಂದ್ರ ಬೋಸ್ ರಂತಹ ಸಹಸ್ರಾರು ಕ್ರಾಂತಿಗಳ ಹೊರರಾಟಗಳು ಹಾಗೂ ವಿವಿಧ ಸಮಯಾವಧಿಗಳಲ್ಲಿ ಆಂಗ್ಲರ ವಿರುದ್ಧ ತೊಡೆ ತಟ್ಟಿದ ಅನೇಕರ ಹೋರಾಟಗಳು ಭಾರತಕ್ಕೆ ಆಗಸ್ಟ್ ೧೫, ೧೯೪೭ ರಂದು ಸ್ವಾತಂತ್ರ್ಯ ದೊರಕುವಲ್ಲಿ ನೆರವಾದವು. ಸ್ವಾತಂತ್ರ್ಯದ ಹೊತ್ತಿನಲ್ಲಿ ದೇಶದಲ್ಲಿದ್ದ ೫೬೫ ರಾಜಮನೆತನಗಳ ರಾಜ್ಯಗಳಲ್ಲಿ ೨೧ ಮಾತ್ರ ರಾಜ್ಯ ಸರ್ಕಾರವನ್ನು ಹೊಂದಿದ್ದವು. ಅವುಗಳಲ್ಲಿ ೩ ರಾಜ್ಯಗಳು ಮಾತ್ರ ಅತೀ ದೊಡ್ಡ ರಾಜ್ಯಗಳಾಗಿದ್ದು, ಅದರಲ್ಲಿ ನಮ್ಮ ಮೈಸೂರು ಸಂಸ್ಥಾನವೂ ಒಂದಾಗಿತ್ತು. 

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಜೀವ-ಜೀವನವನ್ನೇ ಮುಡುಪಾಗಿಟ್ಟವರು ಅನೇಕರು. ಹಾಗೆಯೇ, ನಮಗೆ ದೊರೆತಿರುವ ಸ್ವಾತಂತ್ರ್ಯ ಹಾಗೂ ನಮ್ಮ ದೇಶದ ಸಮಗ್ರತೆಯನ್ನು ದುಷ್ಟರನ್ನು ನಿಗ್ರಹಿಸುವ ಮೂಲಕ ರಕ್ಷಿಸುತ್ತಿರುವವರು ನಮ್ಮ ಸೈನಿಕರು. ಇಂತಹ ಮಹಾನ್ ವ್ಯಕ್ತಿತ್ವಗಳಿಗೆ ನಮ್ಮ ಕೃತಜ್ಞತೆಯನ್ನು ಸಲ್ಲಿಸುವ ಹಾಗೂ ಅವರ ಬಲಿದಾನಗಳನ್ನು ನೆನೆಯುವ ಸಂದರ್ಭವಿದು. ನಾವೆಲ್ಲಾ ದೇಶದ ಉತ್ತಮ ನಾಗರೀಕರಾಗಿ ದೇಶಭಕ್ತಿಯನ್ನು ಮೈಗೂಡಿಸಿಕೊಂಡು ನಮ್ಮ ದೇಶಕ್ಕೆ ಕೈಲಾದ ಸಹಾಯವನ್ನು ಮಾಡಲು ಪ್ರಯತ್ನಿಸೋಣ.  

ವಂದೇ ಮಾತರಂ. 

 ಡಾ| ರೋಹಿತ್ ಕುಮಾರ್ ಎಚ್. ಜಿ. 






ಕಾದು ನೋಡಿ

ಹೊಸ ಅಂಕಣ...

"ತೀರ"


ಆತ್ಮೀಯ ಒಡನಾಡಿಗಳೇ,


೨೦೧೦-೨೦೧೧ ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವಿಶೇಷವಾಗಿ ಮಾಡಲ್ಪಟ್ಟ "ತೀರ" ಎಂಬ ವೀಡಿಯೋ ತುಣುಕನ್ನು ಈ ಮೂಲಕ ನಮ್ಮ ಬ್ಲಾಗ್ ನಲ್ಲಿ upload ಮಾಡುತ್ತಿದ್ದೇವೆ. ನಮ್ಮ ವಿಭಾಗದಲ್ಲಿನ ದಿನಗಳ ನೆನಪನ್ನ ಮತ್ತೆ ನಿಮ್ಮಲ್ಲಿಗೆ ತರುವಂತಹ ಒಂದು ಪುಟ್ಟ ಪ್ರಯತ್ನವು ಇದಾಗಿದ್ದು, ನಿಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ನಂಬಿದ್ದೇವೆ.


ನಿಮ್ಮ ಪ್ರತಿಯೊಂದು ಅನಿಸಿಕೆಗಳಿಗೂ ಆದರದ ಸ್ವಾಗತ.



ಈ ವೀಡಿಯೊ ತುಣುಕನ್ನು ತಯಾರಿಸಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೋರ್ವರಿಗೂ ಈ ಮೂಲಕ ಧನ್ಯವಾದವನ್ನು ಅರ್ಪಿಸುತ್ತೇವೆ.


- ರೋಹಿತ್

ತೀರ ಭಾಗ - 1

ತೀರ ಭಾಗ - 2

ತೀರ ಭಾಗ - 3

ನನ್ನ ಬೆರಳಿನೊಡನೆ ಆಡಿದ ಕನಯ್ಯ...

ನನ್ನ ಬೆರಳಿನೊಡನೆ ಆಡಿದ ಕನಯ್ಯ...