Thursday, July 5, 2018

ಹೀಗೊಂದು ನಲ್ಲೆಯ ಕಾಲ್ಪನಿಕ ಪತ್ರ

ಕಾಣದೂರಿಗೆ ಹೋಗಿರುವ ನನ್ನ ಪ್ರೀತಿಯೇ,

ನಿನ್ನ ಮೇಲೆ ನಂಗೆ ಕೋಪವಿದೆ. ನಿನ್ನ ಬಾಹು-ಬಂಧನದಲ್ಲಿದ್ದು ಹೇಳಬೇಕೆಂದಿದ್ದ ವಿಷಯಗಳನ್ನು ಪತ್ರದಲ್ಲಿ ಹೇಳುವಂತೆ ಮಾಡಿದಕ್ಕೆ.

ಕಾಲೇಜಿನಲ್ಲಿ ನೋಡಿದ ಮೊದಲ ದಿನವೇ ನನ್ನಲ್ಲಿ ನೀನು ಭಯ ಹುಟ್ಟಿಸಿದ್ದೆ. ನೀನು ಬರುತ್ತಿರುವ ದಾರಿಯಲ್ಲಿ ಬರಲು ಸಹ ನಡುಗುವಷ್ಟು ಅಂಜಿಕೆ. ನಿನ್ನಾ ದಿಟ್ಟ ಕಣ್ಣುಗಳು ಎಂತವರನ್ನೂ ದಿಗಿಲುಗೊಳಿಸುತ್ತಿತ್ತು. ಇನ್ನು ನಾನ್ಯಾವ ಲೆಕ್ಕ? ನಿನ್ನಾ ಕಣ್ಣು ನನ್ನ ಕಣ್ಗಳೊಡನೆ ಮೊದಲ ಸಲ ಬೆರೆತಾಗ ನನ್ನ ಉಸಿರು ಒಮ್ಮೆ ಮರೆತು ನಿಂತಿದ್ದು ಮಾತ್ರ ಸುಳ್ಳಲ್ಲ. ನಿನ್ನೊಡನೆ ಮಾತನಾಡಿದಾಗಲೇ ಅರಿವಾಗಿದ್ದು, ನಿನ್ನೊಳಗೊಬ್ಬ 'ಮುದ್ದು' ಅಡಗಿದ್ದಾನೆ  ಎಂದು. ಆ ಮುದ್ದುವಿಗೆ ಬಿದ್ದವಳು ನಾನು. ಆದರೂ ನಿನ್ನಲ್ಲಿ ಬಿನ್ನವಿಸಲು ಏನೋ ಭಯ. ನಿನ್ನ ಪಡೆಯೋ ಪ್ರಯತ್ನವೆಲ್ಲಿ ವಿಫಲವಾಗುವುದೋ ಎಂದು. ನಿನ್ನಲ್ಲೂ ನನ್ನೆಡಗಿನ ಪ್ರೀತಿ ಅಭಿವ್ಯಕ್ತಗೊಳ್ಳುತ್ತಿದ್ದರೂ, ಅದೇನೋ ಹೆಣ್ಣಿನಲ್ಲಿರುವ ಸಹಜ ಅಧೈರ್ಯ ನನ್ನಲಿ. ನಿನ್ನ ಮನಸ್ಸು ಭಾವ  ಭಾರ ತಾಳಲಾರದೆ ಪ್ರೀತಿ ಪ್ರಸ್ತಾಪವಿತ್ತಾಗಲೂ, ನಾಚಿಕೆಯ ಮೌನದೊಂದಿಗಿನ ನಗುವನ್ನೇ ಹೊತ್ತು ನಾನು ನಿಂತಿದ್ದೆ. ನಿಜವಾಗಲೂ, ಮನದ ಕಡಲು ಅಂದು ಬೆಳದಿಂಗಳು ಸಿಕ್ಕಷ್ಟು  ಭೋರ್ಗೆರೆಯುತಿತ್ತು. ಆದರೆ, ಆ ಪ್ರೀತಿಯ ಭೋರ್ಗೆರೆತ ನಿನ್ನ ತೋಯ್ದು ತಣಿಸುವಷ್ಟರಲ್ಲೇ, ನೀ ನನ್ನ ಕಣ್ಣೀರಲ್ಲಿ ನಿಲ್ಲಿಸಿ, ಕಣ್ಮರೆಯಾದೆ.

ಅಂದು ಜನ್ಮವಾದ ನನ್ನ ನೋವಿಗೆ ೫೦ ವರ್ಷ ಪ್ರಾಯವಾದಂತಹ ಭಾವ. ಕಣ್ಣೀರು-ಕೊನೆಯುಸಿರು ಎರಡು ಒಂಟಿ ಹಕ್ಕಿಗಳಂತೆ. ಒಂದು ಹಕ್ಕಿ ನನ್ನೊಳಗೆ ಹೊಕ್ಕಿ ಕುಳಿತಿದ್ದರೆ, ಇನ್ನೊಂದು ನಿನ್ನೊಂದಿಗೆ ಲೀನವಾಗಿತ್ತು. ನಿಂತ ನೆಲ ಕದಲಿ ಕುಸಿದು ಹೋಗಿತ್ತು. ಬರಿಯ ಕತ್ತಲೆಗೆ ಹೆದರುವ ನಾ, ಇಡೀ ಜೀವನ ನಿನ್ನ ಕಣ್ಗಳ ಬೆಳಕಿನಡಿಯಲ್ಲೇ ಬದುಕಬೇಕೆಂದಿದ್ದೆ. ಆದರೆ, ನೀನೇ ನೆರಳಿಗೆ ಸರಿದು ಬಿಟ್ಟೆ. ಎಂದೂ ನನ್ನ ಬಿಟ್ಟಿರೋಲ್ಲ ಎಂದವನು ಯಾಕೆ ಹೀಗೆ ಹೇಳದೇ ಹೊರಟು ಹೋದೆ? ಮುತ್ತು-ಮೋಹಗಳಾಚೆ ಬೆಳೆದಿದ್ದ ನಮ್ಮ ಅನನ್ಯ ಪ್ರೀತಿಗೆ ಜಗತ್ತಿನ ಕಣ್ಣು ಬಿದ್ದಿದ್ದರೆ ಅದಕ್ಕೊಂದು ಹಿಡಿ ಶಾಪ ನನ್ನದು ಯಾವತ್ತಿಗೂ ಇದೆ.

ಕಳೆದೆನಾ ನಿನ್ನಾ?
ಮುಳುಗಿ ಹೋದ ಬೆಳಕ ಹುಡುಕುತಾ
ಕತ್ತಲೆಯಲಿ ಕೈ ಚಾಚಿದೆನಾ?
ಕದಲಿ ಹೋದ ನಿಂತ ನೆಲದಿ
ನಡುಗದೆಯೇ ನಿಲ್ಲುವೆನಾ?
ಎನಿತು ಪ್ರೆಶ್ನೆಗಳ ಸೆರೆಯು?
ಎನಿತು ಮೌನ ಮನದ ಒಳಗೊಳಗೇ ಬರ ಸಿಡಿಲು?
ನೋವ ಹಾದಿಯಲಿ ನಗುವ ಹುಡುಕಾಟವೇತಕೆ ಈ ಪರಿಯು?

ನೀನಿರದ ಬದುಕಿನ ಕಲ್ಪನೆಯು ನನಗಿರಲಿಲ್ಲ. ನೀನೊಬ್ಬನಿರದ ಈಗ, ಜಗತ್ತಿನಲ್ಲಿ ಮತ್ಯಾರು ಇಲ್ಲದೆ ನನ್ನೊಂದಿಗೆ ನೀನೊಬ್ಬನೇ ಇರುವಂತೆ ಭಾವಿಸುತ್ತದೆ. ಇಲ್ಲ ಇಲ್ಲ. ನೀನಲ್ಲದೆ ನನ್ನೊಂದಿಗೆ ಇನ್ನೊಬ್ಬನಿರುತ್ತಾನೆ. ಅವನೇ ನನ್ನ ಕಣ್ಣೀರು. ನನಗಿಂತ ಹೆಚ್ಚು ನನ್ನ ಕಂಬನಿಯೇ ನಿನ್ನ ಇಷ್ಟಪಡುತ್ತೆ ಅನ್ನಿಸೊತ್ತೆ ಕಣೋ. ಏಕೆಂದರೆ, ನಿನ್ನ ನೆನೆದಾಗಲೆಲ್ಲಾ, ನಿನ್ನ ನೆನಪನ್ನ ನೋಡೋಕೆ ತಂತಾನೇ ಕಂಬನಿಯೂ ಸಹ ಜೊತೆ ಬರುತ್ತಾನೆ.

ಉದ್ದುದ್ದ ಗೀಚಿದರೆ ಮುಗಿಯದು
ಮುದ್ದು ಮನದ ಆಳದಿ ಹೊಕ್ಕಿ ಕೂತಾ ಕದನ,
ಎಷ್ಟು ಸಾಲುಗಳಾದರೇನು? ಕವನಗಳ ಹುಚ್ಚೆದ್ದರೇನು?
ವ್ಯಕ್ತವಾಗುವುದೇ? ವ್ಯಕ್ತವು ವ್ಯರ್ಥವಾಗುವುದೇ?
ತಲ್ಲಣಿಸಿದೆ ಮನ. 

ನೀ ನನ್ನಿಂದ ದೂರವಾಗೋ ಕೆಟ್ಟ ಕನಸು ಬಂದಾಗಲೆಲ್ಲಾ ಬೆವರಿ-ಬೆದರಿ ಎಚ್ಚರಗೊಳ್ಳುತ್ತೇನೆ. ಎದ್ದ ಮೇಲೆ ಕನಸಲ್ಲಾದರೂ ಒಂದು ಕ್ಷಣ ನೀನು ಬಂದು ಹೋದೆಯೆಂಬ ಸಮಾಧಾನ ಉಳಿದುಕೊಳ್ಳುತ್ತದೆ. ಪ್ರತಿ ಬಾರಿ ಬಿಕ್ಕಳಿಕೆ ಬಂದಾಗ ನೀನು ನೆನೆಸಿಕೊಳ್ಳುತ್ತಿದ್ದೀಯ ಅಂತ ಮನಸು ಹೇಳಿಕೊಳ್ಳೊತ್ತೆ. ಆಗ ನೀನಿದ್ದಾಗ ಒಂಟಿತನದ ಸುಳಿವಿರುತ್ತಿರಲಿಲ್ಲ. ಆದರೆ, ಈಗ ನನ್ನ ಒಂಟಿತನದ ಜೊತೆಗಾರ ನೀನೆ.

ಕಡಲು ತಿರುತಿರುಗಿ ತೀರದೆಡೆ ಬರುವಂತೆ ನನ್ನೆಲ್ಲಾ ಭಾವಗಳೂ ನಿನ್ನ ಕಡೆಗೇ ಧಾವಿಸುತ್ತವೆ. ನೀನೆಲ್ಲಿದ್ದರೂ ನನ್ನವನೇ. ನಿನ್ನೊಡನೆಯ ನನ್ನೀ ಜೀವನದಿಂದ ನಿನ್ನ ಬೇರ್ಪಡಿಸಲು ಯಾರಿಗೂ ಸಾಧ್ಯವಿಲ್ಲ. ನಿನ್ನೊಂದಿಗೆ ನಾನಿದ್ದ ಪ್ರತಿ ಕ್ಷಣಗಳನ್ನು ಜೀವನಾದ್ಯಂತ ಅನುಭವಿಸುವೆ. ಆದರೆ, ನಿನ್ನ ಮುಂದೆ ಕುಳಿತು, ನನ್ನ ಬೆರಳ ನಡುವೆ ನಿನ್ನ ಬೆರೆಳುಗಳ ಸೇರಿಸಿ, ಒಬ್ಬರನ್ನೊಬ್ಬರು ನೋಡುತ್ತಾ, ಮೌನದಲ್ಲೇ ಮಾತನಾಡುವ ಆಸೆಯೊಂದಿದೆ, ಎಂದು ಬರುವೆ ಹೇಳು?


ನಿನ್ನೇ ಕಾದು ಕುಳಿತಿರುವ ಮನಸು...       

Saturday, June 30, 2018

ನಿಪಾಹ್ ವೈರಾಣು - ಭಯ ಪಡುವ ಮುನ್ನ ಅರಿತುಕೊಳ್ಳೋಣ

ಕಗ್ಗತ್ತಲ ರಾತ್ರಿಗಳಲ್ಲಿ ನಿರ್ಜನ ಕಟ್ಟಡ ಹಾಗೂ ಗುಹೆ-ಬಾವಿಗಳಲ್ಲಿ ತನ್ನ ನಿಶಾಚರ ಬದುಕು ಕಳೆಯುವ ಬಾವುಲಿಗಳನ್ನು ಕಂಡರೆ ಆಶ್ಚರ್ಯ ಹಾಗೂ ಭಯ ಎರಡು ಒಟ್ಟೊಟ್ಟಿಗೆ ಮೂಡುವುದು ಅತ್ಯಂತ ಸಹಜ. ತನ್ನ ಮುಂಗೈಯನ್ನು ರೆಕ್ಕೆಯಾಗಿ ಮಾರ್ಪಡಿಸಿಕೊಂಡಿರುವ ಬಾವುಲಿಗಳು ಹೆಚ್ಚು ಅವಧಿಯ ಕಾಲ ಹಾರುತ್ತಲೇ ಕಳೆಯಬಹುದಾದ ಸಸ್ತನಿಗಳಾಗಿವೆ. ಹೆಚ್ಚಿನ ಜನರಲ್ಲಿ ಬಾವುಲಿಗಳು ಕುತೂಹಲ ಮೂಡಿಸಿದರೂ, ಅದರ ಕಾರ್ಯಾಚರಣೆ ನಮ್ಮ ನಿದ್ರೆಯ ಹೊತ್ತಿನಲ್ಲಿ ಪ್ರಾರಂಭವಾಗುವುದರಿಂದ, ಅವುಗಳನ್ನು ಅರಿಯಲು ಸಾಧ್ಯವಾಗುವುದಿಲ್ಲ. ಗ್ರಾಮ್ ನಷ್ಟು ಚಿಕ್ಕದರಿಂದ ಒಂದೂವರೆ ಕಿಲೋಗ್ರಾಮ್ ನಷ್ಟು ತೂಕದಷ್ಟು ದೊಡ್ಡ ಪ್ರಜಾತಿಯ ಬಾವುಲಿಗಳು ನಮ್ಮ ಸುತ್ತಮುತ್ತಲೂ ಇದ್ದು, ಇವುಗಳ ರೆಕ್ಕೆಗಳು ಅರ್ಧ ಅಡಿಯಿಂದ ಸಾಮಾನ್ಯ ಮನುಷ್ಯನ ಎತ್ತರವಾದ ಐದೂವರೆ ಅಡಿಯಷ್ಟು ದೊಡ್ಡದಿರುತ್ತವೆ. ಎಂಟಿರೋಕಿರೊಪ್ಟೆರಾ ಮತ್ತು ಯಂಗೋಕಿರೊಪ್ಟೆರಾ ಎಂಬ ಎರಡು ವಿಭಾಗಗಳಲ್ಲಿ ಸಿಗುವ ಬಾವುಲಿಗಳಲ್ಲಿ ಕೀಟ, ಹಣ್ಣು ಹಾಗೂ ಇತರ ಪ್ರಾಣಿಗಳನ್ನು ತಿಂದು ಬದುಕುವ ವಿವಿಧ ಪ್ರಬೇದಗಳಿವೆ. ಬಾವುಲಿಗಳು ಹೂವುಗಳ ಪರಾಗಸ್ಪರ್ಶದಲ್ಲಿ, ಕೀಟಗಳನ್ನು ನಾಶಪಡಿಸುವಲ್ಲಿ ಹಾಗೂ ತಮ್ಮ ಸಗಣಿಯಿಂದ ನೈಸರ್ಗಿಕ ಗೊಬ್ಬರದ ತಯಾರಿಕೆಯಲ್ಲಿ ಹೆಚ್ಚು ಉಪಯುಕ್ತವಾಗಿವೆ. ಇವೆಲ್ಲದರ ನಡುವೆ ಬಾವುಲಿಗಳು ಮಾನವನಿಗೆ ಅತ್ಯಂತ ಭಾಯಾನಕ ರೋಗಾಣುಗಳನ್ನು ಹರಡುವ ಮೂಲಕ ಹೆಚ್ಚಿನ ಅಪಾಯವನ್ನು ಸಹ ತಂದಿಡುತ್ತಿವೆ.

ಈಗ ಬಾವುಲಿಗಳ ಮೂಲಕ ಎದುರು ಬಂದು ನಮ್ಮನ್ನೆಲ್ಲಾ ತಲ್ಲಣಗೊಳಿಸಿರುವ ರೋಗಾಣುವೇ ನಿಪಾಹ್ ವೈರಸ್! ಹೌದು. ದಕ್ಷಿಣ ಭಾರತದ ಕೇರಳದಲ್ಲಿ ಇತ್ತೀಚೆಗೆ ಸ್ಫೋಟಗೊಂಡ ನಿಪಾಹ್ ಸೋಂಕು ಕನಿಷ್ಠ 11 ಜನರನ್ನು ಬಲಿ ತೆಗೆದುಕೊಂಡಿದೆ. ಸುಮಾರು 25ಕ್ಕೂ ಅಧಿಕ ಜನರು ಅಸ್ವಸ್ಥತೆಯಿಂದ ಆಸ್ಪತ್ರೆಗೆ ದಾಖಲಾಗಿ, ಭಾಗದಲ್ಲಿ ಹೆಚ್ಚಿನ ಆತಂಕ ಮನೆ ಮಾಡಿದೆ. ಹಾಗೆಂದು ಇದು ಪ್ರಥಮ ಬಾರಿಗೆ ಕಂಡುಬಂದಿರುವ ಸೋಂಕು ಖಂಡಿತಾ ಅಲ್ಲ! ೧೯೯೮ ರಲ್ಲಿ ಮಲೇಷಿಯಾದ ಕಂಪುಂಗ್ ಸುಂಗೈ ನಿಪಾಹ್ ಎಂಬ ಪ್ರದೇಶದಲ್ಲಿ ವೈರಾಣುವಿನ ಆರ್ಭಟ ಪ್ರಥಮವಾಗಿ ಕಾಣಿಸಿಕೊಂಡು, ಒಟ್ಟು ೨೮೩ ಸೋಂಕಿತರಲ್ಲಿ ೧೦೯ (ಶೇಕಡಾ ೩೯ ರಷ್ಟು) ಜನರು ಬಲಿಯಾಗಿದ್ದರು. ಅಂದು ಸೋಂಕಿಗೆ ಕಾರಣವಾದ ವೈರಾಣುವನ್ನು ಪ್ರದೇಶದ ಹೆಸರಿಟ್ಟುನಿಪಾಹ್ವೈರಾಣು ಎಂದು ಕರೆಯಲಾಯಿತು.

ವೈರಾಣುವು ಕಾಡಿನಲ್ಲಿ ಸಾಮಾನ್ಯವಾಗಿ ಟೆರೋಪಸ್ ಎಂಬ ಹಣ್ಣುಗಳನ್ನು ತಿನ್ನುವ ಗುಂಪಿನ ಬಾವುಲಿಗಳಲ್ಲಿ ಬೆಳೆದು ನೆಲೆಸಿರುತ್ತವೆ. ರೋಗಾಣು ಹೊಂದಿದ ಬಾವುಲಿಗಳ ಜೊಲ್ಲು ಮತ್ತು ಮೂತ್ರದಿಂದ ಕಲುಷಿತಗೊಂಡ ಹಣ್ಣುಗಳನ್ನು ಅಥವಾ ನೀರನ್ನು ಸೇವಿಸುವುದರಿಂದ ನಿಪಾಹ್ ವೈರಸ್ ಸುಲಭವಾಗಿ ನಮ್ಮ ಅಥವಾ ಯಾವುದೇ ಪ್ರಾಣಿಯ ದೇಹವನ್ನು ಸೇರಿಕೊಳ್ಳಬಹುದು. ಬಾವುಲಿಗಳಲ್ಲಿ ಯಾವುದೇ ರೀತಿಯ ಸೋಂಕನ್ನು ಉಂಟು ಮಾಡದ ವೈರಾಣುಗಳಿಂದ ಸೋಂಕಿತಗೊಂಡ ಇತರ ಪ್ರಾಣಿಗಳು ಹಾಗೂ ವ್ಯಕ್ತಿಗಳು ಸಹ ರೋಗಾಣುವನ್ನು ಹರಡಬಲ್ಲರು. ಮಲೇಷಿಯಾದಲ್ಲಾದ ನಿಪಾಹ್ ಸ್ಫೋಟಕ್ಕೆ ಸೋಂಕಿತ ಹಂದಿಗಳು ಪ್ರಮುಖ ಕಾರಣವಾಗಿತ್ತು.

ಟೆರೋಪಸ್ ಬಾವುಲಿಗಳು ಬಹುತೇಕ ಪಾಕಿಸ್ತಾನದಿಂದ ಭಾರತ, ಬಾಂಗ್ಲಾದೇಶ ಒಳಗೊಂಡಂತೆ ದಕ್ಷಿಣ ಮತ್ತು ಆಗ್ನೇಯ ಏಷ್ಯಾದುದ್ದಕ್ಕೂ ಕಾಣಸಿಗುತ್ತವೆ. ಹಾಗಾಗಿ ನಿಪಾಹ್ ಸೋಂಕು ಪ್ರದೇಶಗಳಲ್ಲಿ ಹೆಚ್ಚು ಸಾಮಾನ್ಯವಾಗಿದೆ. 2001 ರಿಂದ ಇಲ್ಲಿಯವರೆಗೆ ಪ್ರತಿ ವರ್ಷ ಬಾಂಗ್ಲಾದೇಶದಲ್ಲಿ ಹಾಗೂ ಆಗಾಗ ನಮ್ಮ ಭಾರತದಲ್ಲೂ ಸೋಂಕು ಕಾಡುತ್ತಲಿದೆ. ೨೦೦೧ ರಲ್ಲಿ ಭಾರತದ ಪಶ್ಚಿಮ ಬಂಗಾಳದ ಸಿಲಿಗುರಿ ಪಟ್ಟಣದಲ್ಲಿ ಕಂಡು ಬಂದ ನಿಪಾಹ್ ಸೋಂಕು ಒಟ್ಟು ೪೫ ಜನರನ್ನು ಬಳಿ ಪಡೆದಿತ್ತು. ಆದರೆ, ದಕ್ಷಿಣ ಭಾರತಕ್ಕೆ ವೈರಾಣು ಮೊದಲ ಬಾರಿಗೆ ದಾಳಿಯಿಟ್ಟಿದೆ.  

ವೈರಾಣು ದೇಹ ಸೇರಿದ ಕೆಲವೇ ದಿನಗಳಲ್ಲಿ ರೋಗಲಕ್ಷಣಗಳು ಗೋಚರವಾಗುತ್ತವೆ. ಮೆದುಳು ಮತ್ತು ಶ್ವಾಸಕೋಶಕ್ಕೆ ಪ್ರಮುಖವಾಗಿ ಹಾನಿಯನ್ನುಂಟು ಮಾಡುವ ನಿಪಾಹ್ ವೈರಾಣು, ಜ್ವರ, ತಲೆ ನೋವು, ಕೆಮ್ಮು, ಉಸಿರಾಟ ಸಮಸ್ಯೆ, ಅರೆ ಪ್ರಜ್ಞಾವಸ್ಥೆ, ದಿಗ್ಬ್ರಾಂತರಾಗುವುದು ಮತ್ತು ಮಾನಸಿಕ ಗೊಂದಲ ಸೇರಿದಂತೆ ರಕ್ತನಾಳಗಳ ಮತ್ತು ಮೆದುಳಿನ ಉರಿಯೂತಗಳಂತಹ ಅಪಾಯಕಾರಿ ಸಮಸ್ಯೆಗಳನ್ನುಂಟು ಮಾಡುತ್ತದೆ. ಶೀಘ್ರದಲ್ಲಿ ಚಿಕಿತ್ಸೆ ದೊರಕದಿದ್ದರೆ ಕೆಲವೇ ದಿನಗಳಲ್ಲಿ ರೋಗಿಯು ಕೋಮಾಗೆ ತಲುಪಿ, ಸಾವನ್ನಪ್ಪುತ್ತಾನೆ. ಶೇಕಡಾ 38 ರಿಂದ 92 ರಷ್ಟು ಮರಣ ಪ್ರಮಾಣವನ್ನು ಹೊಂದಿರುವ ನಿಪಾಹ್ ಸೋಂಕಿಗೊಳಗಾದ 100 ರಲ್ಲಿ 70ಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಿರುವುದು ನಿಜಕ್ಕೂ ಕಳವಳಕರವಾಗಿದೆ. ಅಲ್ಲದೇ, ಸೋಂಕಿನಿಂದ ಬದುಕುಳಿದವರಲ್ಲಿ ದೀರ್ಘಾವಧಿಯವರೆಗೆ ನರರೋಗಗಳು ಬಾಧಿಸುತ್ತವೆ. ಎಲ್ಲಾ ಕಾರಣಗಳಿಂದ ಇತ್ತೀಚಿಗೆ ವಿಶ್ವ ಆರೋಗ್ಯ ಸಂಸ್ಥೆಯು ನಿಪಾಹ್ ವನ್ನು ಆಧ್ಯತೆಯ ರೋಗಾಣುಗಳ ಪಟ್ಟಿಯಲ್ಲಿ ಸೇರಿಸಿದೆ.

ಹಾಗಿದ್ದರೆ ಇದಕ್ಕೆ ಇರುವ ಪರಿಹಾರಗಳೇನು? ಕಳೆದ ಎರಡು ದಶಕಗಳಲ್ಲಿ ರೋಗದ ಬೆಳವಣಿಗೆ ಕುರಿತಾಗಿ ಹೆಚ್ಚು ಸಂಶೋಧನೆಗಳು ನಡೆದಿದ್ದರೂ, ಸೋಂಕನ್ನು ತಡೆಗಟ್ಟುವಲ್ಲಿ ಹಾಗೂ ನಿವಾರಿಸುವಲ್ಲಿ ಸೂಕ್ತ ಪ್ರಗತಿ ಕಾಣಲಾಗಿಲ್ಲ. ಹಾಗಾಗಿ ಸದ್ಯದ ಮಟ್ಟಿನಲ್ಲಿ ಯಾವುದೇ ರೀತಿಯ ಔಷಧಗಳು ಇದಕ್ಕೆ ಲಭ್ಯವಿಲ್ಲ. ಕೇವಲ ಗುಣಲಕ್ಷಣಗಳನ್ನು ನಿವಾರಿಸಿ, ತೀವ್ರ ರೀತಿಯ ಬೆಂಬಲ ವ್ಯವಸ್ಥೆ ನೀಡಿ ರೋಗಿಗೆ ಆರೈಕೆ ಮಾಡುವುದೊಂದೆ ಪ್ರಸ್ತುತ ಅನುಸರಿಸುತ್ತಿರುವ ಚಿಕಿತ್ಸಾ ವಿಧಾನವಾಗಿದೆ. ಹಲವು ವಿಜ್ಞಾನಿಗಳು ವಿವಿಧ ಪ್ರಾಣಿಗಳ ಮೇಲೆ ಅಧ್ಯಯನ ನಡೆಸಿ, ನಿಪಾಹ್ ಸೋಂಕಿನಿಂದ ಸಂಪೂರ್ಣ ಸುರಕ್ಷೆಯನ್ನು ನೀಡುವ ಹಲವಾರು ಲಸಿಕೆಗಳನ್ನು ಕಂಡುಹಿಡಿದಿದ್ದಾರೆ. ಆದರೆ, ಇವುಗಳನ್ನು ಮಾನವನಲ್ಲಿ ಪರೀಕ್ಷಿಸುವಂತಹ ಕಾರ್ಯಕ್ಕೆ ಯಾವುದೇ ಅದ್ಯಯನ ಸಂಸ್ಥೆ ಅಥವಾ ಔಷಧೀಯ ಕಂಪನಿಗಳು ಮುಂದಾಗಿಲ್ಲ. ಪ್ರತಿ ವರ್ಷ ಅತಿ ಕಡಿಮೆ ಜನರಲ್ಲಿ ಕಾಣಿಸಿಕೊಳ್ಳುವ ಸೋಂಕಿಗೆ ಸಿದ್ದಪಡಿಸುವ ಲಸಿಕೆಯು ಹೆಚ್ಚಿನ ಲಾಭ ತಂದುಕೊಡಲಾರದು ಎನ್ನುವುದೊಂದೆ ಇದರ ಹಿಂದಿರುವ ಪ್ರಮುಖ ಕಾರಣ. ಸಮಸ್ಯೆಗೆ ಪರಿಹಾರ ನೀಡಲು ಜನವರಿ 2017 ರಲ್ಲಿ ಕೊಯಲೇಶನ್ ಫಾರ್ ಎಪಿಡೆಮಿಕ್ ಪ್ರಿಪೇರ್ಡ್ನೆಸ್ ಇನ್ನೋವೇಶನ್ (ಸಿ..ಪಿ..) ಎಂಬ ಸಾರ್ವಜನಿಕ-ಖಾಸಗಿ ಒಕ್ಕೂಟವೊಂದನ್ನು ರಚಿಸಲಾಗಿದೆ. ವಿವಿಧ ಸರ್ಕಾರ ಹಾಗೂ ಔಷಧೀಯ ಕಂಪನಿಗಳನ್ನು ಹೊಂದಿರುವ ಒಕ್ಕೂಟ ನಿಪಾಹ್ ದಂತಹ ಸಾಂಕ್ರಾಮಿಕ ಸಾಮರ್ಥ್ಯವುಳ್ಳ ರೋಗಗಳಿಗೆ ಸುರಕ್ಷಿತವಾದ ಹಾಗೂ ಕೈಗೆಟುಕುವಂತಹ ಪರಿಣಾಮಕಾರಿ ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಕಾರ್ಯಪ್ರವೃತ್ತವಾಗಿದೆ. ಮುಂಬರುವ ವರ್ಷಗಳಲ್ಲಿ ಲಸಿಕೆಗಳು ಮಾರುಕಟ್ಟೆಗೆ ಬರುವ ಎಲ್ಲಾ ಲಕ್ಷಣಗಳು ಇವೆ. ಲಸಿಕೆಗಳ ಜೊತೆಯಲ್ಲೇ ವೈರಾಣುವನ್ನು ನಾಶಪಡಿಸುವಂತಹ ಔಷಧಗಳನ್ನು ಅಭಿವೃದ್ಧಿಪಡಿಸಲು ಸಹ ಪ್ರಯತ್ನಗಳು ನಡೆದಿವೆ. ಪ್ರಯತ್ನಗಳಲ್ಲಿ ನಾವು ಯಶಸ್ಸು ಕಾಣುವವರೆಗೆ ವೈರಾಣುವು ಬರದಂತೆ ತಡೆಗಟ್ಟುವುದೇ ನಮ್ಮ ಮುಂದಿರುವ ದಾರಿಯಾಗಿದೆ


ವೈರಾಣು ಬರದಂತೆ ಹಾಗೂ ಹರಡದಂತೆ ತಡೆಗಟ್ಟಲು ಇರುವ ಮೊದಲ ದಾರಿ ಜಾನುವಾರುಗಳಿಗೆ ವೈರಾಣು ಸೋಂಕದಂತೆ ನೋಡಿಕೊಳ್ಳುವುದು. ಇದಕ್ಕಾಗಿ ಬಾವುಲಿಗಳು ವಾಸಿಸುವಂತಹ ಮತ್ತು ಹಣ್ಣುಗಳಿರುವಂತಹ ಮರಗಳನ್ನು ಆದಷ್ಟು ಜಾನುವಾರುಗಳ ಸಾಕಾಣಿಕೆ ಕೇಂದ್ರದ ಬಳಿ ಇರದಂತೆ ನೋಡಿಕೊಳ್ಳಬೇಕು. ಇದು ಜಾನುವಾರುಗಳಿಂದ ಮಾನವನಿಗೆ ನಿಪಾಹ್ ವೈರಸ್ ಸೋಂಕು ಹರಡುತ್ತಿರುವ ಪ್ರದೇಶಗಳಲ್ಲಿ ಹೆಚ್ಚು ಸಹಕಾರಿಯಾಗುತ್ತವೆ. ರೀತಿಯ ಕ್ರಮಗಳಿಂದ ಮಲೇಶಿಯಾದ ಕೆಲವು ಭಾಗಗಳಲ್ಲಿ ನಿಪಾಹ್ ವನ್ನು ಹತ್ತಿಕ್ಕಲು ಸಾಧ್ಯವಾಗಿದೆ. ಇದರೊಂದಿಗೆ ನಿಪಾಹ್ ಕುರಿತಾಗಿ ಎಲ್ಲರಲ್ಲಿ ಅರಿವು ಮೂಡಿಸುವುದು ಸಹ ಅತ್ಯವಶ್ಯಕವಾಗಿದೆ. ಸೋಂಕಿತರೊಂದಿಗೆ ಇರುವಾಗ ಕೆಲವು ಸುರಕ್ಷತಾ ಕ್ರಮಗಳನ್ನು ನಾವು ವಹಿಸಬೇಕಾಗುತ್ತದೆ. ಅವುಗಳಲ್ಲಿ ಪ್ರಮುಖವಾದುವು: ಸೋಂಕಿತರೊಂದಿಗೆ ಅಸುರಕ್ಷಿತ ನೇರ  ಭೌತಿಕ ಸಂಪರ್ಕ ಇಟ್ಟುಕೊಳ್ಳದಿರುವುದು; ಕೈಗಳನ್ನು ನಿರಂತರವಾಗಿ ಸಾಬೂನಿನಿಂದ ತೊಳೆದುಕೊಳ್ಳುವುದು; ರೋಗಿಗಳೊಂದಿಗೆ ಆಹಾರ-ಪಾನೀಯಗಳನ್ನು ಹಂಚಿಕೊಳ್ಳದಿರುವುದು; ಹಣ್ಣುಗಳನ್ನು ತಿನ್ನುವ ಮೊದಲು ಚೆನ್ನಾಗಿ ತೊಳೆಯುವುದು ಮತ್ತು ಸಿಪ್ಪೆಯನ್ನು ಸುಲಿಯುವುದು. ಹಾಗೆಂದು ನಿಪಾಹ್ ಎಚ್೧ಎನ್೧ ಅಥವಾ ಸಾರ್ಸ್ ರೋಗದಂತೆ ಗಾಳಿಯಲ್ಲಿ ಹರಡುವುದಿಲ್ಲ. ಆದುದರಿಂದ, ಎಲ್ಲಾ ಕ್ರಮಗಳನ್ನು ಸಂಧರ್ಭವನ್ನು ಅರಿತು ಪಾಲಿಸಬೇಕೇ ಹೊರತು ಅನಾವಶ್ಯಕ ಧೈರ್ಯಗೆಡುವ ಅಗತ್ಯವಿಲ್ಲಾ ಎಂಬುದು ಅಷ್ಟೇ ಸತ್ಯ.


- ರೋಹಿತ್ 




ಕಾದು ನೋಡಿ

ಹೊಸ ಅಂಕಣ...

"ತೀರ"


ಆತ್ಮೀಯ ಒಡನಾಡಿಗಳೇ,


೨೦೧೦-೨೦೧೧ ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವಿಶೇಷವಾಗಿ ಮಾಡಲ್ಪಟ್ಟ "ತೀರ" ಎಂಬ ವೀಡಿಯೋ ತುಣುಕನ್ನು ಈ ಮೂಲಕ ನಮ್ಮ ಬ್ಲಾಗ್ ನಲ್ಲಿ upload ಮಾಡುತ್ತಿದ್ದೇವೆ. ನಮ್ಮ ವಿಭಾಗದಲ್ಲಿನ ದಿನಗಳ ನೆನಪನ್ನ ಮತ್ತೆ ನಿಮ್ಮಲ್ಲಿಗೆ ತರುವಂತಹ ಒಂದು ಪುಟ್ಟ ಪ್ರಯತ್ನವು ಇದಾಗಿದ್ದು, ನಿಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ನಂಬಿದ್ದೇವೆ.


ನಿಮ್ಮ ಪ್ರತಿಯೊಂದು ಅನಿಸಿಕೆಗಳಿಗೂ ಆದರದ ಸ್ವಾಗತ.



ಈ ವೀಡಿಯೊ ತುಣುಕನ್ನು ತಯಾರಿಸಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೋರ್ವರಿಗೂ ಈ ಮೂಲಕ ಧನ್ಯವಾದವನ್ನು ಅರ್ಪಿಸುತ್ತೇವೆ.


- ರೋಹಿತ್

ತೀರ ಭಾಗ - 1

ತೀರ ಭಾಗ - 2

ತೀರ ಭಾಗ - 3

ನನ್ನ ಬೆರಳಿನೊಡನೆ ಆಡಿದ ಕನಯ್ಯ...

ನನ್ನ ಬೆರಳಿನೊಡನೆ ಆಡಿದ ಕನಯ್ಯ...