ಉದ್ದುದ್ದ ಗೀಚಿದರೆ ಮುಗಿಯದು,
ಮುದ್ದು ಮನದ ಆಳದಿ ಹೊಕ್ಕಿ ಕೂತಾ ಕದನ..
ಎಷ್ಟು ಸಾಲುಗಳಾದರೇನು? ಕವನಗಳ ಹುಚ್ಹೆದ್ದರೇನು?..
ವ್ಯಕ್ತವಾಗುವುದೇ? ವ್ಯಕ್ತವು ವ್ಯರ್ಥವಾಗುವುದೇ??
ತಲ್ಲಣಿಸಿದೆ ಮನ.. ..
ತನ್ನಳಿವಾದಂತಿದೆ, ನಾ ಶೂನ್ಯ ಹೊದ್ದಂತಿದೆ,
ಸರ್ವಂ ತನ್ಮಯಂ ನನ್ನೊಳಗೆ...
ನವಿರಾಗಿಯೆದ್ದ ತಿಳಿ ಗಾಳಿ, ತುಸು ತುಸುವೇ ಬೀರಿ,
ನಿನ್ನ ಬಿಂಬವನೇ ಎದಿರು ನಿಲ್ಲಿಸಿದೆ..
ಇದ್ದಕ್ಕಿದ್ದಂತೆ, ಕನಸಲ್ಲೆದ್ದಂತೆ..
ಅಲ್ಲೊಂದು ಸಿಹಿ ಮೊಗ್ಗ ಕಂಡಂತೆ..
ಕಂಪನೆರೆಯುತಾ ಹೂವಾಗಿ, ಮನವೆಂಬ ಕನ್ಯೆ ತಾ ಮುಡಿಯೇ ಅದ,
ಸ್ವರ್ಗವೇ ಕರದಿ ಸಿಕ್ಕಿ ನಿಂತಂತೆ..
ರೆಕ್ಕೆಯೆರಡು ಹುಟ್ಟಿ, ಮೊದಲಾಗಿ ಬಿಚ್ಚಿ..
ಪಟ ಪಟನೆ ಬಡಿದು ಹಾರುವ ಪ್ರಯತ್ನದಿ..
ಭಯವು ತಬ್ಬಿದ ಮನದ, ಬಳಿ ಜಾರಿ ನೀನಪ್ಪಿದೊಡೆ,
ಬಾನಿನಾಚೆಗೆ ಬಾಳಿನಾ ಜೊತೆ ಸಾಗಿ ಬಂದಂತೆ..
ನೀ ಗೊಂದಲವೋ, ಮೇಲೆದ್ದ ಭಾವೋಧ್ವೇಗವೋ..?
ಭೋರ್ಗೆರೆವ ಬಿರುಗಾಳಿಯ ನಡುವೆ ನಾನಾಡುವ ಉಸಿರಾಟವೋ??
ನನ್ನೊಳಗೆ ನನಗಾಗೆಂದು ಬಂದ ಮೊದಲ ಆಲೋಚನೆಯೋ..?
ಅನುಮಾನವಿಹುದು.. ನಾ ನಾನೋ? ಅಥವ ನೀನೋ???
- ರೋಹಿತ್...