Friday, June 2, 2017

ಭಾರತೀಯರೊಂದಿಗೆ ಸಮರ ಸಾರಿರುವ ಅದೃಶ್ಯ ಅಣುಜೀವಿ!



ಭಾರತವು ಹಲವಾರು ಕ್ಷೇತ್ರಗಳಲ್ಲಿ ಸಾಧನೆಯ ಶಿಖರವನ್ನು ಏರುವಲ್ಲಿ ದಾಪುಗಾಲಿಡುತ್ತಿದೆ. ನಮ್ಮಲ್ಲಿನ ಅನ್ವೇಷಣೆಗಳು ಜಗತ್ತನ್ನೇ ಕೈ ಬೆರಳಿನಡಿ ತಂದು ನಿಲ್ಲಿಸುವಷ್ಟು ಮುಂದುವರೆದಿದೆ. ಎಂತಹ ದೊಡ್ಡ ಜೀವಿಯೇ ನಮ್ಮೆದುರು ಸಮರಕ್ಕೆ ನಿಂತರೂ ಹೊಡೆದುರುಳಿಸಬಲ್ಲ ತಂತ್ರಜ್ಞಾನಗಳು ನಮ್ಮೊಂದಿಗಿವೆ. ಇಂತಹ ಸಮಯದಲ್ಲಿ ಅಣುಜೀವಿಯೊಂದು ದೊಡ್ಡ ಯುದ್ಧ ಸಾರುವ ಸಂದೇಶ ನೀಡಿದೆ. ಕಾಣದ ಜೀವಕಣವೊಂದು ಊದಿರುವಂತಹ ರಣಕಹಳೆಯು ಆ ಜೀವಿಯ ಸಾಮರ್ಥ್ಯವನ್ನು ಅನುಮಾನಿಸಿ, ನೆಮ್ಮದಿಯಿಂದ ನಿದ್ರಿಸಿದ್ದ ಭಾರತೀಯರನ್ನು ಹೊಡೆದೆಬ್ಬಿಸಿರುವುದು ಮಾತ್ರ ನಿಜ. ಅಷ್ಟಾಗಿ ಇಲ್ಲಿ ಹೇಳ ಹೊರಟಿರುವ ಆ ಜೀವಿ ಯಾವುದು ಅಂತ ನೀವು ಯೋಚಿಸುತ್ತಿದ್ದರೆ, ಅದುವೇ ಮೈಕೋಬ್ಯಾಕ್ಟೀರಿಯಂ ಟ್ಯುಬೆರ್ಕ್ಯುಲೋಸಿಸ್. ಹೌದು. ನಾವು ಹಿಂದೆ ಒಂದು ಮಟ್ಟಿಗೆ ಸೋಲಿಸಲು ಯಶಸ್ವಿಯಾಗುತ್ತಿದ್ದೇವೆಂದು ಭ್ರಮಿಸಿದ್ದ ಅದೇ ಹಳೆಯ ಜೀವಿ, ಈಗ ಸರ್ವ ಸನ್ನದ್ಧವಾಗಿ ನಮ್ಮ ಮೇಲೆ ಸಮರ ಸಾರಿದೆ.


ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿರುವಂತೆ, ಮೈಕೋಬ್ಯಾಕ್ಟೀರಿಯಂ ಟ್ಯುಬೆರ್ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾವು ಕ್ಷಯ ರೋಗವನ್ನು ಉಂಟುಮಾಡುತ್ತದೆ. ಶೇಕಡಾ ೮೦-೯೦ ರಷ್ಟು ಕ್ಷಯ ರೋಗವು ಶ್ವಾಸಕೋಶ ಸಂಬಂಧಿತವಾಗಿದ್ದರೂ, ಈ ರೋಗಾಣುವು ಕೇಂದ್ರ ನರಮಂಡಲ ವ್ಯವಸ್ಥೆ, ದುಗ್ದರಸ ವ್ಯವಸ್ಥೆ, ಜನನಾಂಗ ವ್ಯವಸ್ಥೆ, ಮೂಳೆ, ಕೀಲು ಹಾಗೂ ಜಠರಗರುಳಿನ ವ್ಯವಸ್ಥೆಗಳಿಗೂ ಸಹ ಸೋಂಕು ತರಬಲ್ಲದು. ಹೆಚ್ಚಿನ ಬಾರಿ ಈ ಬ್ಯಾಕ್ಟೀರಿಯಾದ ಸೋಂಕು ಯಾವುದೇ ರೀತಿಯ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಇಂತಹ ಸೋಂಕನ್ನು ಸುಪ್ತ ಕ್ಷಯ ಎಂದು ಕರೆಯುತ್ತಾರೆ. ಶೇಕಡಾ ೧೦ ರಷ್ಟು ಸುಪ್ತ ಕ್ಷಯಗಳು ಮಾತ್ರ ಪೂರ್ಣ ರೋಗವಾಗಿ  ಬೆಳೆದು, ಜೀವಕ್ಕೆ ಮಾರಕವಾಗಿ ಪರಿಣಮಿಸುತ್ತವೆ. ಮೂರು ವಾರಗಳಿಗಿಂತಲೂ ಹೆಚ್ಚಿನ ಕಾಲದಿಂದ ಹಳದಿ/ಹಸಿರು ಅಥವಾ ರಕ್ತವಿರುವ ಕಫಾದೊಂದಿಗಿನ ಕೆಮ್ಮು, ದೇಹದ ತೂಕ ನಷ್ಟ, ಜ್ವರ, ಎದೆನೋವು,  ಆಯಾಸ, ಹಸಿವು ನಷ್ಟ ಹಾಗೂ ರಾತ್ರಿ ಬೆವರುವಿಕೆಗಳು ಶ್ವಾಸಕೋಶ ಸಂಬಂಧಿತ ಕ್ಷಯ ರೋಗದ ಗುಣಲಕ್ಷಣಗಳು. ರೋಗ ನಿರೋಧಕ ಸಾಮರ್ಥ್ಯವು ಕಡಿಮೆಯಿರುವ ಎಲ್ಲಾ ವಯೋಮಾನದವರೂ (ಹೆಚ್ಚಿನ ಪಾಲು ಮಕ್ಕಳು ಮತ್ತು ವೃದ್ದರು) ಈ ರೋಗಕ್ಕೆ ಸುಲಭವಾಗಿ ತುತ್ತಾಗಬಲ್ಲರು ಹಾಗೂ ಇಂತಹ ಸೋಂಕಿತರು ಉಸಿರಾಡುವ ಗಾಳಿಯ ಮೂಲಕ ರೋಗಾಣುಗಳು ಹರಡಬಲ್ಲವು.

ಕ್ಷಯ ರೋಗಕ್ಕೆ ಹಲವಾರು ಔಷಧಗಳು ಈಗಾಗಲೇ ಲಭ್ಯವಿದ್ದು, ರೋಗದ ಪ್ರಮಾಣದ ಆಧಾರದಲ್ಲಿ ಇವುಗಳಲ್ಲಿ ಯಾವುದನ್ನು, ಎಷ್ಟು ಅವಧಿಯವರೆಗೆ ತೆಗೆದುಕೊಳ್ಳಬಹುದೆಂದು ವೈದ್ಯರು ನಿರ್ಧರಿಸುತ್ತಾರೆ. ಐಸೋನಿಯಾಜಿಡ್, ರಿಫಾಮ್ಪಿನ್, ಪೈರಾಜಿನಮೈಡ್, ಎಥಾಮ್ಬುಟಾಲ್, ಮುಂತಾದುವುಗಳು ಲಭ್ಯವಿರುವ ಔಷಧಗಳಲ್ಲಿ ಹೆಚ್ಚು ಸೂಚಿಸುವಂತವುಗಳು (ಪ್ರಥಮ ಆಧ್ಯತಾ ಔಷಧಗಳು). ಈ  ಔಷಧಗಳನ್ನು ಸಂಯೋಜನೆಯಲ್ಲಿ ಬಳಸಿ ಕ್ಷಯ ರೋಗವನ್ನು ತಕ್ಕಮಟ್ಟಿಗೆ ಹಿಮ್ಮೆಟ್ಟಿಸುವಲ್ಲಿ ನಾವು ಯಶಸ್ವಿಯಾಗಿದ್ದೆವು.


ಹಾಗಾದರೆ, ಈಗ ಯಾಕೆ ನಾವು ಚಿಂತಿಸುವ ಸಂದರ್ಭ ಬಂದೊದಗಿದೆ? ಹಿಮ್ಮೆಟ್ಟಿದ್ದ ಜೀವಾಣು ಹೇಗೆ ನಮ್ಮ ಮೇಲೆ ಆಕ್ರಮಣ ಮಾಡುವ ಸಾಮರ್ಥ್ಯ ಪಡೆದಿದೆ? ಇವುಗಳನ್ನರಿಯಲು ನಾವು ಕೆಲವು ಅಂಕಿ-ಅಂಶಗಳ ಮೇಲೆ ಗಮನಹರಿಸಬೇಕಾಗುತ್ತದೆ.


ಭಾರತವು ವಿಶ್ವದಲ್ಲೇ ಅತೀ ಹೆಚ್ಚು ಕ್ಷಯ ರೋಗ ಬಾಧಿತ ೩೦ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ ೨೦೧೫ ರಲ್ಲಿ ಕ್ಷಯ ರೋಗಕ್ಕೆ ಒಳಗಾದ ವಿಶ್ವದ ೧೦೪ ಲಕ್ಷ ಜನರಲ್ಲಿ ೨೮.೪೦ ಲಕ್ಷ ಜನರು ಭಾರತೀಯರಾಗಿದ್ದಾರೆ. ಅಂದರೆ, ವಿಶ್ವದ ಸುಮಾರು ಶೇಕಡಾ ೨೭ ರಷ್ಟು ಕ್ಷಯ ರೋಗಿಗಳು ಭಾರತೀಯರಾಗಿದ್ದಾರೆ. ೨೦೧೩ ಮತ್ತು ೨೦೧೪ ರಲ್ಲಿ ಭಾರತದಲ್ಲಿ ಈ ರೋಗಕ್ಕೆ ಒಳಗಾದವರ ಸಂಖ್ಯೆ ಕ್ರಮವಾಗಿ ಸುಮಾರು ೨೧ ಮತ್ತು ೨೨ ಲಕ್ಷವಿದೆ. ಅಂದರೆ, ಪ್ರತಿ ವರ್ಷ ಕ್ಷಯ ರೋಗಕ್ಕೆ ಒಳಗಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇನ್ನು ಈ ರೋಗದಿಂದ ಭಾರತದಲ್ಲಾಗುತ್ತಿರುವ ಪ್ರಾಣ ಹಾನಿಯ ಬಗ್ಗೆ ಹೇಳುವುದಾದರೇ, ೨೦೧೩ ರಲ್ಲಿ ಸುಮಾರು ೨.೪೦ ಲಕ್ಷ ಜನ ಮರಣ ಹೊಂದಿದ್ದರೆ, ೨೦೧೪ ರಲ್ಲಿ ಈ ಸಂಖ್ಯೆ ಸುಮಾರು ೨.೨೦ ಲಕ್ಷದಷ್ಟಿದೆ. ಈ ಸಾವಿನ ಸಂಖ್ಯೆ ೨೦೧೫ ರಲ್ಲಿ ಗಣನೀಯವಾಗಿ ಎರಡು ಪಟ್ಟಿಗೂ ಹೆಚ್ಚಿನ ಏರಿಕೆ ಕಂಡು ಸುಮಾರು ೪.೮೦ ಲಕ್ಷದಷ್ಟು ತಲುಪಿದೆ. ಈ ಎಲ್ಲಾ ಅಂಕಿ-ಅಂಶಗಳು ಭಾರತದಲ್ಲಿ ಕ್ಷಯ ರೋಗದ ಉಲ್ಭಣತೆಯನ್ನು ನಿರೂಪಿಸುತ್ತವೆ.


ಈ ಹೆಚ್ಚುತ್ತಿರುವ ಕ್ಷಯ ರೋಗಕ್ಕೆ ಪ್ರಮುಖ ಕಾರಣ, ರೋಗಕಾರಕ ಸೂಕ್ಷ್ಮಜೀವಿ ಮೈಕೋಬ್ಯಾಕ್ಟೀರಿಯಂ ಟ್ಯುಬೆರ್ಕ್ಯುಲೋಸಿಸ್ ನಲ್ಲಿ ಬೆಳೆಯುತ್ತಿರುವ ರೋಗ ನಿರೋಧಕ ಶಕ್ತಿ. ಸೂಕ್ತ ಔಷಧಗಳನ್ನು (ಉದಾ: ಸೂಕ್ತ ಸಾಮರ್ಥ್ಯವುಳ್ಳ ಔಷಧ) ಸೇವಿಸದಿರುವುದು ಹಾಗೂ ಸೂಚಿತ ಔಷಧಗಳನ್ನು ಪೂರ್ಣ ಅವಧಿಗೆ ನಿಯಮಿತವಾಗಿ ಸೇವಿಸದಿರುವುದು ರೋಗಾಣುಗಳಲ್ಲಿ ಈ ಔಷಧ ನಿರೋಧಕ ಶಕ್ತಿ ಬೆಳವಣಿಗೆಯಾಗಲು ಕಾರಣಗಳು. ಈ ರೀತಿಯಲ್ಲಿ ಬೆಳವಣಿಗೆಯಾದ ಔಷಧ ನಿರೋಧಕ ಶಕ್ತಿಯನ್ನು ಅರ್ಜಿಸಿಕೊಂಡ ಔಷಧ ನಿರೋಧಕ ಶಕ್ತಿ ಎಂದು ಕರೆಯುತ್ತಾರೆ. ಈ  ಔಷಧ ನಿರೋಧಕ ಕ್ಷಯ ರೋಗದಲ್ಲಿ ಮುಖ್ಯವಾಗಿ ಎರಡು ವಿಧಗಳು: ಬಹು ಔಷಧ ನಿರೋಧಕ ಕ್ಷಯ ಮತ್ತು ವ್ಯಾಪಕ ಔಷಧ ನಿರೋಧಕ ಕ್ಷಯ.

ಬಹು ಔಷಧ ನಿರೋಧಕ ಕ್ಷಯವು ಒಂದಕ್ಕಿಂತ ಹೆಚ್ಚು ಪ್ರಥಮ ಆಧ್ಯತಾ ಔಷಧಗಳ (ಉದಾ: ಐಸೋನಿಯಾಜಿಡ್, ರಿಫಾಮ್ಪಿನ್, ಪೈರಾಜಿನಮೈಡ್, ಎಥಾಮ್ಬುಟಾಲ್ ಮತ್ತು ಸ್ಟ್ರೆಪ್ಟೋಮೈಸಿನ್) ವಿರುದ್ಧ ಪ್ರತಿರೋಧವನ್ನು ತೋರಬಲ್ಲದಾಗಿರುತ್ತದೆ. ಇಂತಹ ಕ್ಷಯವನ್ನು ಎರಡನೇ ಆಧ್ಯತಾ ಔಷಧಗಳ (ಉದಾ: ಫ್ಲ್ಯೂರೋಕ್ವಿನೊಲೋನ್ಸ್, ಕಾನಾಮೈಸಿನ್, ಇತರೆ) ಮೂಲಕ ಚಿಕಿತ್ಸೆ ನೀಡಬಹುದಾದರೂ, ಈ ವಿಧದ ಕ್ಷಯ ಹೊಂದಿದ ಶೇಕಡಾ ೪೦ ರಷ್ಟು ರೋಗಿಗಳು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ! ಅದೇ ರೀತಿ ವ್ಯಾಪಕ ಔಷಧ ನಿರೋಧಕ ಕ್ಷಯವು ಬಹು ಔಷಧ ನಿರೋಧಕ ಕ್ಷಯವು ಪ್ರತಿರೋಧವನ್ನು ಹೊಂದಿರುವ ಔಷಧಗಳ ಜೊತೆಯಲ್ಲಿ ಫ್ಲ್ಯೂರೋಕ್ವಿನೊಲೋನ್ಸ್ ಮತ್ತು ಕನಿಷ್ಠ ಒಂದು ಇತರೆ ಎರಡನೇ ಆಧ್ಯತಾ ಔಷಧಕ್ಕೆ ನಿರೋಧಕತೆಯನ್ನು ಹೊಂದಿರುತ್ತದೆ. ಇಂತಹ ಕ್ಷಯವನ್ನು ಗುಣಪಡಿಸಲು ೨ ವರ್ಷಗಳವರೆಗೂ ಚಿಕಿತ್ಸೆಯನ್ನು ನೀಡಬೇಕಾಗಬಹುದು ಹಾಗೂ ಇದರ ಚಿಕಿತ್ಸೆಗೆ ಬಳಸುವ ವಿಷಕಾರಿ ಔಷಧಗಳು ತಲೆಗೂದಲು ಉದುರುವಿಕೆ ಮತ್ತು ಸೈಕೋಸಿಸ್ ಸೇರಿದಂತೆ ಹಲವು ಅಡ್ಡ ಪರಿಣಾಮಗಳನ್ನು ಬೀರುತ್ತವೆ. ಈ ವಿಧದ ಕ್ಷಯವನ್ನು ಹೊಂದಿರುವ ಶೇಕಡಾ ೬೦ ರಷ್ಟು ರೋಗಿಗಳು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ!


ಈ ವಿಷಯದ ಕುರಿತಾಗಿ ಮೇ ೦೯, ೨೦೧೭ ರಂದು 'ದಿ ಲ್ಯಾನ್ಸೆಟ್ ಇನ್ಫೆಕ್ಷಿಯಸ್ ಡಿಸೀಸಸ್' ಎಂಬ ಅಂತಾರಾಷ್ಟ್ರೀಯ ವಿಜ್ಞಾನ ಸಂಶೋಧನಾ ಪತ್ರಿಕೆಯಲ್ಲಿ ಯು.ಎಸ್.ಎ., ದಕ್ಷಿಣ ಆಫ್ರಿಕಾ, ರಷ್ಯಾ ಸೇರಿದಂತೆ ವಿವಿಧ ದೇಶಗಳ ಸಂಶೋಧಕರು ಆತಂಕಕಾರಿ ವಿಷಯವೊಂದನ್ನು ತಮ್ಮ ಅಧ್ಯಯನದ ಮೂಲಕ ಹೊರಹಾಕಿದ್ದಾರೆ. ಈ ವರದಿಯಲ್ಲಿ ಕ್ಷಯ ರೋಗದಿಂದ ಹೆಚ್ಚು ಬಾಧಿತ ರಾಷ್ಟ್ರಗಳಾದ ಭಾರತ, ಫಿಲಿಪೈನ್ಸ್, ರಷ್ಯಾ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಭವಿಷ್ಯದಲ್ಲಿ ಔಷಧ ನಿರೋಧಕ ಕ್ಷಯದಿಂದಾಗುವ ಹೊರೆಯನ್ನು ವಿಜ್ಞಾನಿಗಳು ವಿವರಿಸಿದ್ದಾರೆ. ಇದರ ಪ್ರಕಾರ ೨೦೧೫ರಲ್ಲಿ ಭಾರತದಲ್ಲಿ ಒಳಗಾಗಿರುವ ಒಟ್ಟು ಕ್ಷಯ ರೋಗದಲ್ಲಿ ಶೇಕಡಾ ೨.೫೦ ರಷ್ಟಿರುವ ಔಷಧ ನಿರೋಧಕ ಕ್ಷಯದ ಪ್ರಮಾಣವು ೨೦೪೦ ರ್ ವೇಳೆಗೆ ಶೇಕಡಾ ೧೨.೪೦ ರಷ್ಟಾಗಲಿದೆ! ೨೦೪೦ರಲ್ಲಿ ವಾರ್ಷಿಕ ಒಳಗಾಗಲಿರುವ ಒಟ್ಟು ಔಷಧ ನಿರೋಧಕ ಕ್ಷಯದಲ್ಲಿ ಶೇಕಡಾ ೮.೯೦ ರಷ್ಟು ವ್ಯಾಪಕ ಔಷಧ ನಿರೋಧಕ ಕ್ಷಯವಾಗಿರಲಿದೆ. ಅಂದರೆ, ಭಾರತವು ದೊಡ್ಡ ಮಟ್ಟದ ಅಪಾಯದೆಡೆಗೆ ಸಾಗುತ್ತಿದ್ದು, ಮುಂದಿನ ೨ ದಶಕಗಳಲ್ಲಿ ಉಳಿದೆಲ್ಲಾ ರೋಗಗಳಿಗಿಂತ ಕ್ಷಯ ರೋಗವು ನಮ್ಮನ್ನು ಇನ್ನಿಲ್ಲದಂತೆ ಕಾಡದಿರುವುದಂತು ಸತ್ಯ.

ಹಾಗಾದರೆ, ಈ ಕಾಣದಿರುವ ಜೀವಿಯೆದುರು ಹೋರಾಡಲು ಇರುವ ಮಾರ್ಗಗಳು ಯಾವುವು? ಸದ್ಯಕ್ಕೆ ನಮಗೆ ತಿಳಿದಿರುವ ಮಾರ್ಗಗಳು ಹೀಗಿವೆ. ಪ್ರತಿ ರೋಗಿಯು ಪೂರ್ಣ ಪ್ರಮಾಣದ ಚಿಕಿತ್ಸೆಯನ್ನು ಪಡೆಯುವಂತೆ ಮಾಡಿ, ಔಷಧ ನಿರೋಧಕ ಕ್ಷಯವು ಅಭಿವೃದ್ಧಿಯಾಗದಂತೆ ತಡೆಯುವುದು. ವ್ಯಕ್ತಿಯಿಂದ ವ್ಯಕ್ತಿಗೆ ರೋಗಾಣುಗಳು ಹರಡುವುದನ್ನು ತಡೆಗಟ್ಟಲು ಕ್ರಮಕೈಗೊಳ್ಳುವುದು. ರೋಗಾಣುವಿನ ಔಷಧ ನಿರೋಧಕ ಸಾಮರ್ಥ್ಯವನ್ನು ಅರಿತು ಚಿಕಿತ್ಸೆ ಒದಗಿಸುವುದು. ಚಿಕಿತ್ಸೆಯೊಂದಿಗೆ ರೋಗವನ್ನು ತಡೆಗಟ್ಟುವಿಕೆಗೂ ಹೆಚ್ಚಿನ ಆಧ್ಯತೆಯನ್ನು ನೀಡುವುದು. ರೋಗದ ಕುರಿತಾಗಿ  ಜನಸಾಮಾನ್ಯರಲ್ಲಿ,ಅದರಲ್ಲು ಪ್ರಮುಖವಾಗಿ ಗ್ರಾಮೀಣ ಭಾಗದ ಜನರಲ್ಲಿ ಅರಿವು ಮುಡಿಸುವುದು.


ಮೇಲೆ ಉಲ್ಲೇಖಿಸಿರುವ ಎಲ್ಲಾ ಕ್ರಮಗಳನ್ನು ಈ ಹಿಂದಿನಿಂದಲೂ ಕೈಗೊಳ್ಳುತ್ತಿದ್ದರೂ ಸಹ ಇವುಗಳಿಗೆ ಹೆಚ್ಚಿನ ಆಧ್ಯತೆ ನೀಡಿ, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಅವಶ್ಯಕತೆಯಿದೆ. ಈಗಾಗಲೇ ಭಾರತವು ಪ್ರತಿ ವರ್ಷ ಕೋಟ್ಯಂತರ ರೂಪಾಯಿಗಳನ್ನು ಇದಕ್ಕಾಗಿ ವ್ಯಯಿಸುತ್ತಿದೆ. ಇನ್ನೂ ಹೆಚ್ಚಿನ ಪ್ರಯತ್ನವು ನಮ್ಮಿಂದ ಆಗಬೇಕಾಗಿದೆ. ಇಲ್ಲದೆ ಹೋದರೇ, ಕೋಟ್ಯಂತರ ಜನರ ಪ್ರಾಣ ಹಾನಿಗೆ ನಾವು ಸಾಕ್ಷಿಯಾಗಬೇಕಾಗುತ್ತದೆ. 'ಆರೋಗ್ಯವೇ ಭಾಗ್ಯ' ಎಂಬ ನಾಣ್ನುಡಿಯ ಅರ್ಥವು ಅರಿವಾಗುವ ಸಮಯ ಬಂದಿದೆ. ಅದೇ ಸಮಯವೂ ಬಹಳಷ್ಟು ವೇಗವಾಗಿ ಸಾಗುತ್ತಿದೆ. ಅದರ ವೇಗದಲ್ಲಿ ನಾವು ಸಾಗಬಲ್ಲೆವಾ ಎಂಬುದೇ ಪ್ರೆಶ್ನೆಯಾಗಿದೆ.


- ಡಾ| ರೋಹಿತ್ ಕುಮಾರ್ ಎಚ್. ಜಿ.  


ಇಮೇಲ್: rohitkumarhg@outlook.com
ಬ್ಲಾಗ್ ಪುಟ:www.rohitkumarhg.blogspot.com
ಫೇಸ್-ಬುಕ್ ಪುಟ: www.facebook.com/rohitkumarhg1

ಈ ಅಂಕಣ ಕನ್ನಡ ಪ್ರಭ ಪತ್ರಿಕೆಯಲ್ಲಿ ದಿನಾಂಕ ೦೨-೦೫-೨೦೧೭ ರಂದು ಪುಟ ಸಂಖ್ಯೆ ೮ (ಇತರೆ ಸಂಚಿಕೆಗಳು) ಮತ್ತು ೧೦ (ಬೆಂಗಳೂರು ಸಂಚಿಕೆ)ರಲ್ಲಿ ಪ್ರಕಟಗೊಂಡಿದೆ. ಇ-ಪೇಪರ್ ಗಾಗಿ ಕೆಳಗಿನ ಲಿಂಕನ್ನು ಬಳಸಿರಿ. 

http://epaper.kannadaprabha.in/epaper_1_1_71_2017-06-02_.ht…



No comments:

Post a Comment

ಕಾದು ನೋಡಿ

ಹೊಸ ಅಂಕಣ...

"ತೀರ"


ಆತ್ಮೀಯ ಒಡನಾಡಿಗಳೇ,


೨೦೧೦-೨೦೧೧ ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವಿಶೇಷವಾಗಿ ಮಾಡಲ್ಪಟ್ಟ "ತೀರ" ಎಂಬ ವೀಡಿಯೋ ತುಣುಕನ್ನು ಈ ಮೂಲಕ ನಮ್ಮ ಬ್ಲಾಗ್ ನಲ್ಲಿ upload ಮಾಡುತ್ತಿದ್ದೇವೆ. ನಮ್ಮ ವಿಭಾಗದಲ್ಲಿನ ದಿನಗಳ ನೆನಪನ್ನ ಮತ್ತೆ ನಿಮ್ಮಲ್ಲಿಗೆ ತರುವಂತಹ ಒಂದು ಪುಟ್ಟ ಪ್ರಯತ್ನವು ಇದಾಗಿದ್ದು, ನಿಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ನಂಬಿದ್ದೇವೆ.


ನಿಮ್ಮ ಪ್ರತಿಯೊಂದು ಅನಿಸಿಕೆಗಳಿಗೂ ಆದರದ ಸ್ವಾಗತ.



ಈ ವೀಡಿಯೊ ತುಣುಕನ್ನು ತಯಾರಿಸಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೋರ್ವರಿಗೂ ಈ ಮೂಲಕ ಧನ್ಯವಾದವನ್ನು ಅರ್ಪಿಸುತ್ತೇವೆ.


- ರೋಹಿತ್

ತೀರ ಭಾಗ - 1

ತೀರ ಭಾಗ - 2

ತೀರ ಭಾಗ - 3

ನನ್ನ ಬೆರಳಿನೊಡನೆ ಆಡಿದ ಕನಯ್ಯ...

ನನ್ನ ಬೆರಳಿನೊಡನೆ ಆಡಿದ ಕನಯ್ಯ...