Tuesday, July 13, 2010

ಎತ್ತಿ ಬಾ ಮತ್ತೆ ಅವತಾರವ....

 ಈ ದೇಶ ಉದ್ದಾರ ಆಗೋಲ್ಲ...! ಜಗತ್ತಿನಲ್ಲಿ ಏನೇ ಆದರೂ, ಮನುಷ್ಯ ಮಾತ್ರ ತಾನು ಬುದ್ದಿ ಕಲಿಯೋ ಯಾವ ಲಕ್ಷಣನೂ ತೋರಿಸ್ತಿಲ್ಲ... ನಡುದಾರಿಯಲ್ಲಿ ನಿಂತುಕೊಂಡು ಹಗಲು ದರೋಡೆ ಮಾಡ್ತಿದ್ರೂ, ವಿರೋದವಾಗಿ ಏಳ್ತಾ ಇರೋ ಯಾವ ದನಿಯೂ ಕೇಳುಗನ ಹತ್ತಿರ ಸಹ ಸುಳಿತಾ ಇಲ್ಲ.. ಸಾಯೋವಾಗ ಜೊತೆಗೆ ಹೊತ್ಕೊಂಡು ಹೋಗೋದು ನಾವೇ ಕಂಡು ಹಿಡಿದ 'ಶೂನ್ಯ'ವನ್ನಾ ಅಂತ ತಿಳಿದಿದ್ದರೂ, ಕೆಲವರ ಆಸೆಗಳಿಗೆ ಮಾತ್ರ ಮಿತಿ ಎಂಬುದು ಇಲ್ವೇ ಇಲ್ಲ. ತಾನೇ ತನ್ನೊಳಿತಿಗೆ ಸಂಶೋಧಿಸಿದ ಯಾವ ಆವಿಷ್ಕಾರಗಳೂ, ಆಟಂ ಬಾಂಬ್ ಗಳೂ, ತನ್ನೊಳಗಿನ ನೀಚ ಬುದ್ದಿಯನ್ನ ಸುಟ್ಟಿ ಹಾಕ್ತಾ ಇಲ್ಲ.. ಸಮಾಜದಲ್ಲಿ ಆಗ್ತಾ ಇರೋ ಪ್ರತಿ ಏರುಪೇರನ್ನ ಸರಿಪಡಿಸಲು ದೇವರು ಅವತಾರ ಎತ್ತಿ ಬರ್ತಾನೆ ಅಂತ ನಂಬ್ಕೊಂಡು ಕಾಯೋ ಜನ ಇರೋ ತನಕ ಈ ದೇಶ ಉದ್ದಾರ ಆಗೋಲ್ಲಾ... ಖಂಡಿತವಾಗಲೂ ಆಗೋಲ್ಲಾ...

          ಒಂದು ಮಗು ಹುಟ್ಟಿದಾಗ ಮಾಡಿಸೋ ಅದರ Birth Certificate ಇಂದ ಹಿಡಿದು, ಸತ್ತಾಗಿನ Death Certificate ವರೆಗೂ.., ಗಾಡಿ ಓಡಿಸೋಕೆ ಇರೋ D.L (Driving License) ಇಂದ ಹಿಡಿದು, ಓದಿಸೋಕೆ ಇರೋ ನಮ್ಮ "University (ವಿಶ್ವವಿದ್ಯಾನಿಲಯ)" ವರೆಗೂ.., ಪ್ರತಿಯೊಂದೂ ನಿಮಗೆ ಸುಲಭದಲ್ಲಿ ದಕ್ಕಬೇಕು ಅಂದ್ರೆ ನಿಮ್ಮಲ್ಲಿ Vitamin-M ಇರಲೇಬೇಕು! ಭಾರತದಲ್ಲಿ ಒಂದು ವ್ಯವಹಾರ (Bussiness)ಕ್ಕೆ ಕೈ ಹಾಕಬೇಕು ಅಂದ್ರೆ ಕೇವಲ ಒಂದು ಒಳ್ಳೆಯ ಯೋಚನೆಯ ಯೋಜನೆ ಇದ್ರೆ ಸಾಲದು..! ವಿಳಾಸ ಇಲ್ಲದೇ ಇರೋ ಒಂದು ತುಂಬು ನೋಟುಗಳ ಎನ್ವೆಲೋಪ್ (Envelop) ಕೂಡಾ ಬೇಕು- ಲಂಚ!. ಆಗ ಮಾತ್ರ ಯಾವುದೇ ತೊಂದರೆ ಇಲ್ಲದೆ ಪರವಾನಗಿ ಎನ್ನೋದು ಸಿಕ್ಕಿಬಿಡತ್ತೆ ನಿಮಗೆ. ಭಾರತದಲ್ಲಿನ ಭ್ರಷ್ಟಾಚಾರದ ತೀವ್ರತೆ ಬಗ್ಗೆ ಗಮನ ಸೆಳೆವಂತಹ ಒಂದು ಕಥೆಯನ್ನ ಅಗಸ್ಟ್ 1997 ರಲ್ಲೇ Hinduism Today ನಲ್ಲಿ ಪ್ರಕಟಗೊಂಡ "Bribery in India" ಎಂಬ ಲೇಖನದಲ್ಲಿ ಲೇಖಕ ಹೇಳ್ತಾನೆ.

          ಒಬ್ಬ Income Tax Commissioner, ಉದ್ಯಮಿಯಾದ ತನ್ನ ಗೆಳೆಯನ ತೆರಿಗೆ ಪಾವತಿಯ ವಿಚಾರವಾಗಿ ಸಲಹೆ ನೀಡುತ್ತಿರುತ್ತಾನೆ. ಹಾಗಿದ್ದಾಗ ಅವನು ತನ್ನ ಗೆಳೆಯ 1,00,000/- ರೂ ಗಳನ್ನ ನಾಯಿಗಾಗಿ ವೆಚ್ಚ (Dog Account) ಮಾಡಿದನ್ನ ಕಂಡು ಆಶ್ಚರ್ಯಗೊಳ್ಳುತ್ತಾನೆ. ಇರುವ ನಾಲ್ಕು ನಾಯಿಗಳಿಗಾಗಿ ಒಂದು ಲಕ್ಷ ರೂಪಾಯಿಗಳನ್ನ ಖರ್ಚು ಮಾಡಿದ ರೀತಿಯನ್ನ ಕೇಳಲಾಗಿ, "ಅಯ್ಯೋ, ನನ್ನ ನಾಲ್ಕು ನಾಯಿಗಳ ಹೊರತಾಗಿ, ನಾನು ಕಡೇ ಪಕ್ಷ 50 ನಾಯಿಗಳನ್ನ ಉದ್ಯಮದ ಒಳಿತಿಗಾಗಿ ಸಾಕಬೇಕು. ಬೇರೆ ಬೇರೆ ಸರ್ಕಾರಿ ಅಧಿಕಾರಿಗಳಿಗೆ ಕೊಟ್ಟ ಲಂಚದ ಅಕೌಂಟ್ ನ ಯಾವ ಹೆಸರಲ್ಲಿ ತೋರಿಸೋದು ಗೆಳೆಯ??.. ಹಾಗಾಗಿ ಅವುಗಳನ್ನ Dog Account ನಲ್ಲಿ ತೋರಿಸೋದು ಇದಕ್ಕಾಗಿ ನಾನು ಕಂಡುಕೊಂಡ ಪರಿಹಾರ" ಅಂತ ಹೇಳ್ತಾನೆ... ಹೇಗಿದೆ ನೋಡಿ...!!?



           ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಕೇಳಲಾಗುತ್ತಿರುವ ಲಂಚದಲ್ಲಿ 91% ಡಿಮಾಂಡ್ ಮಾಡುತ್ತಿರುವವರು ಸರ್ಕಾರಿ ನೌಕರರು. ಇದರಲ್ಲಿ ಅರ್ಧದಷ್ಟು ಮಂದಿ ಲಂಚ ಪಡೆಯುತ್ತಿರುವುದು ಸರಿಯಾದ ಸಮಯದಲ್ಲಿ ನಮ್ಮ ಕೆಲಸ ಮಾಡಿ ಕೊಡುವುದಕ್ಕೆ..!. ಎಂತಹ ವಿಪರ್ಯಾಸ ಇದು...? ಪ್ರತಿಯೊಂದು ಸವಲತ್ತುಗಳೂ, ತಿಂಗಳು ತಿಂಗಳು ತಪ್ಪದೇ ಬರೋ ಸಂಬಳ, ಹೆಚ್ಚು-ಕಮ್ಮಿ ವರ್ಷ ಪೂರ್ತಿ ಸಾಕಾಗೋ ಅಷ್ಟು extra ರಜಗಳು... ಇಷ್ಟೆಲ್ಲಾ ಇದ್ದು ಕೊಟ್ಟ ಕಾಸಿಗೆ (ಸಂಬಳ, ಲಂಚ ಅಲ್ಲ...!) ಪ್ರಾಮಾಣಿಕವಾಗಿ ಕೆಲಸ ಮಾಡೋ ಅಂತವರು ಎಲ್ಲೋ ಒಂದಿಬ್ಬರು ಬೆರಳೆಣಿಕೆಗೂ ಸಿಗದೇ ಹೋಗ್ತಾರೆ. ಈ ತರ ಲಂಚಾನ expect ಮಾಡೋ ಜನರಲ್ಲಿ ರಾಜಕಾರಣಿಗಳು ಮತ್ತು ಅವರ ಸಹವರ್ತಿಗಳು, ಪೋಲಿಸ್/ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು, Passport , DL ತರಹದ document ಮಾಡಿಸಿ ಕೊಡೋಕೆ ಅಂತ ಹುಟ್ಟಿಕೊಂಡಿರೋ ಮಧ್ಯವರ್ತಿ(agency) ಗಳು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿರೋ ಅತೀ ಬುದ್ದಿವಂತರೂ ಸೇರಿದಾರೆ ಅಂತ ಯಾರಿಗೂ ಹೇಳಿ ತಿಳಿಸೋ ಅವಶ್ಯಕತೆ ಇಲ್ಲ ಅನ್ಸೊತ್ತೆ. ಎಷ್ಟರ ಮಟ್ಟಿಗೆ ಇವರುಗಳು ತಮ್ಮ ಕಿಸೆಗಳಿಗೆ ಕಂಡವರ ಕಾಸು ಇಳಿಸಿಕೊಳ್ಳುತ್ತಾರೆ ಅಂದರೆ ಅವರ ಈ outside income, ಸಂಬಳಕ್ಕಿಂತಾ ಎಷ್ಟೋ ಶೇಕಡಾ ಹೆಚ್ಚಿರುತ್ತದೆ. ಇಂತಹ ಕೆಲಸಕ್ಕೆ ಸೇರಿಕೊಳ್ಳಲು ಇರೋ ಬೇಡಿಕೆಗಳೂ ಅಷ್ಟೇ. ಕೆಲಸ ನೀಡೋಕೆ ಲಕ್ಷ offer ಮಾಡೋನೊಬ್ಬ!., ಕೇಳಿದಷ್ಟು ಕಾಸು ಕೊಟ್ಟು ಬರುವವನೊಬ್ಬ!. ಆತನೋ, ತಾ ಕೊಟ್ಟ ಲಂಚದ ಹಣವನ್ನಾ ಬಡ್ಡಿ ಸಮೇತ ಲಂಚದ ಹೆಸರಲ್ಲೇ ಪಡೆದು, ಲೆಕ್ಕ ಚುಕ್ತಾ ಆಯ್ತು ಅಂತ ಹೇಳಿ ಪಾಪ ಕಳಿದುಕೊಳ್ಳೋಕೆ ವರ್ಷ ವರ್ಷ ತಿರುಪತಿಗೆ ಮುಡಿ ಹರಕೆ ನೀಡುತ್ತಾನೆ. ಮಾಡು (ಮೇಲ್ಚಾವಣಿ) ಸೋರುತಿರೋ ಮನೆಯಲ್ಲಿರೋ ಒಬ್ಬ ಬಡಪಾಯಿ ಕೂಡಾ ಆತನ ಕಣ್ಣಿಗೆ ಹಣ ಬಿಡೋ ಮರವಾಗಿ ಕಾಣ್ತಾನೆ. ನಿನ್ನ ಬೇರು ಒಣಗಿದರೂ ಪರವಾಗಿಲ್ಲ ನನಗೆ ಹಣ್ಣು ಕೊಡೊ ಮಹರಾಯ ಅಂತಾನೆ....


ಕೃಪೆ: http://trak.in/tags/business/2009/06/30/india-corruption-bribery-report


          ಎಲ್ಲರಿಗೂ ಈ ಲಂಚದ ಬಿಸಿ ತಟ್ಟೋದಿಲ್ಲ. ಧನಿಕನಿಗೆ ಇದರಿಂದಾಗೋ ನಷ್ಟವೀನು ಇಲ್ಲ. ದುಡಿದರೆ ಮಾತ್ರ ಕೂಳು ಅನ್ನೋ ಪರಿಸ್ಥಿತಿಯಲ್ಲಿರೋ ಬಡವ/ಮದ್ಯಮವರ್ಗದ ಬಡಪಾಯಿ ಮಾತ್ರ ಅಣು ಜೀವಿ, ತೃಣ ಸಮಾನ.. ಏನೊಂದೂ ಪಡಿಯೋಕೂ ಹರ ಸಾಹಸ ಪಡೋದೇ ಅವನ ಜೀವನ..

          ಬುದ್ದಿವಂತರನ್ನ ಹುಟ್ಟಿ ಹಾಕೋಕೆ ಸರ್ಕಾರ ಎದ್ದು ನಿಲ್ಲಿಸಿರೋ ನಮ್ಮ ಅತ್ಯುನ್ನತ University ಗಳಲ್ಲಿ ಎಂತೆಂತವರು ಇರಬಹುದು ಅನ್ನೋ ಬಗ್ಗೆ ಕೆಲವೊಂದು ಸಂಗತಿ ಹೇಳಲೇಬೇಕು. ಮಕ್ಕಳಿಗೆ/ವಿದ್ಯಾರ್ಥಿಗಳಿಗೆ Percentage ಲೆಕ್ಕದಲ್ಲಿ ಮಾರ್ಕ್ಸ್ ಕೊಡೋರು ಮಾಡ್ತಿರೋ Percentage ದಂಧೆ ಇರಬಹುದು, Transfer Certificate (TC) ಪಡಿಯೋದಕ್ಕೆ ಹಣ transfer ಮಾಡು ಅಂತ ಹೇಳೋ ಅದ್ಯಾಪಕೇತರ ನೌಕರರಿರಬಹುದು, Development Section - Finance Section ಅಂದ್ಕೊಂಡು ಒಂದೊಂದು bill/letter ನ pass ಮಾಡೋಕೆ 'ಕಾಯಿಸಿ-ಕಾಯಿಸೋ' ತಂತ್ರ ಮಾಡೋ SDA-FDA ಗಳಿರಬಹುದು.., ವಿದ್ಯಾರ್ಥಿಗಳಿಗೆ ಬರುವ OBC, SC-ST Fellowship ಗಳಲ್ಲೂ ತಮ್ಮ ಲಾಭನ ಕೇಳೋ ಅಧಿಕಾರಿಗಳಿರಬಹುದು... ಬಂದಿರೋ refundable ಹಣದ Cheque ಬಂದೇ ಇಲ್ಲ ಅಂತ ಕೈ ಬಿಸಿ ಮಾಡದ ವಿದ್ಯಾರ್ಥಿಗಳಿಗೆ ಹೇಳಿ ಅವರು ತಮ್ಮ ಪ್ರಯತ್ನ ಕೈ ಬಿಟ್ಟಾಗ ತಾವೇ ಸಹಿ ಮಾಡಿ ಸ್ವೀಕರಿಸೋ ಕೀ(ಳು)ಲಾಡಿ ಗಳಿರಬಹುದು..ಇಷ್ಟೇ ಯಾಕೆ ವಿದ್ಯಾರ್ಥಿಗಳ ಹೆಸರಲ್ಲಿ ತಾವೇ scholarships ಗೆ apply ಮಾಡಿ ಅವನಿಗೆ ತಿಳಿಯದೇ ಅವನ ಪಾಲಿನ ಅವಕಾಶವನ್ನ ಬಳಸಿಕೊಳ್ಳುವ ನೀಚ ನಿಸ್ಸೀಮರೂ ನಮ್ಮೊಳಗೇ, ನಮ್ಮೊಡನೆ ಇರಬಹುದು... ಎಲ್ಲೆಡೆ ತೂತು ಬಿಟ್ಟು ನೀರು ಹೋದ ಜಾಗವನ್ನ ನೆಪ ಮಾತ್ರಕ್ಕೆ ಹುಡುಕೋ ದೊಡ್ಡವರೂ ಸಿಗಬಹುದು...?? 


          ಇದಕ್ಕೆಲ್ಲಾ ಕೊನೆ ಎಂಬುದು ಇಲ್ವಾ? ಭ್ರಷ್ಟಾಚಾರದ ನಿರ್ಮೂಲನೆ ಸಾಧ್ಯಾನೇ ಇಲ್ವಾ? ಇಂತವರನ್ನು ಸುಮ್ಮನೆ ಬಿಟ್ಟರೆ ತಾಯಿ ಭಾರತ ಮಾತೆಗೂ ತುಂಡು ಬಟ್ಟೆ ಕೊಟ್ಟು ನಿಲ್ಲಿಸದೆ ಬಿಡ್ತಾರ ಇವರು?? ಈ ಶಾಪದ ಪರಿಹಾರಕ್ಕೆ ಕೆಲವು ನನ್ನೊಳಗಿನ ವಿಚಾರಗಳು ಹೀಗಿದೆ...
  • ಆದಷ್ಟೂ ಸರ್ಕಾರಿ ಕಛೇರಿಗಳು ಹಾಗೂ ಜನತೆಯ ನಡುವಿನ ಮದ್ಯವರ್ತಿಗಳನ್ನ ತಡೆಯುವುದು.
  • ಖಾಸಗಿ ವಲಯಗಳಲ್ಲಿನಂತೆ ಪ್ರತಿ ಸಿಬ್ಬಂದಿಗಳಿಗೂ ದಿನದ ಗುರಿಯನ್ನ(Target) ನೀಡುವುದಲ್ಲದೆ, ತನ್ನಲ್ಲಿ ಬಂದ ದಾಖಲೆಯನ್ನು 24 ಗಂಟೆಯೊಳಗೆ ಪರಾಮರ್ಶಿಸಿ ಹಿಂದಿರುಗಿಸಬೇಕು ಅಥವಾ ಮುಂದಿನ ಅವಶ್ಯ ಕಾರ್ಯಗಳಿಗೆ ಕಳಿಸಬೇಕು ಎನ್ನುವಂತಹ ನಿಲುವಳಿಗಳನ್ನ ಹೊರಡಿಸುವುದು.
  • ಸರ್ಕಾರಿ ನೌಕರರ ವೇತನ ಭತ್ಯೆಯನ್ನು ಇರುವ ಅವಕಾಶಗಳ ಆಡಿಯಲ್ಲಿ ಹೆಚ್ಚಿಸುವುದು. 
  • ಭ್ರಷ್ಟಾಚಾರದ ವಿರುದ್ದ ಕಟ್ಟು ನಿಟ್ಟಾದ ಕಾನೂನು ರೀತಿಯ ಕ್ರಮಗಳನ್ನ ಜರುಗಿಸುವುದು.
  • ಭ್ರಷ್ಟಾಚಾರದ ಎದಿರು ಹೋರಾಡುತ್ತಿರೋ ಲೋಕಾಯುಕ್ತರಿಗೆ ಚೌಕಾಸಿ ಮಾಡದೆ ನಿಭಂದನಾ ಮುಕ್ತ ಅಧಿಕಾರ ಕೊಡುವುದು.
  •  ಬಹುಮುಖ್ಯವಾಗಿ ಲಂಚಮುಕ್ತ ಭಾರತದ ನಿರ್ಮಾಣಕ್ಕೆ ಪ್ರತಿಯೋರ್ವನೂ ತಾನು ಸಿದ್ದನಾಗಿ ನಿಂತು, ಹೋರಾಡೋ ಮನೋಭಾವನೆ ಬೆಳಸಿಕೊಳ್ಳುವುದು.

ಇಂತಹ ಪಿಡುಗಿನ ಎದುರು ಸೆಣಸಾಡೋದು ಸಂತೋಷ್ ಹೆಗಡೆಯವರಂತಹ ಬರಿಯ  ನಿಷ್ಟಾವಂತ ಲೋಕಾಯುಕ್ತರ ಕೆಲಸ ಮಾತ್ರವಲ್ಲ.. ಯುವಶಕ್ತಿ ಮನಸು ಮಾಡಿದರೆ ಆಗದ  ಕೆಲಸವೆಂಬುದಾವುದೂ ಇಲ್ಲ.  ಯಾವ ಕೃಷ್ಣನೂ ನಾವು ಹುಟ್ಟಿಹಾಕಿದ ಮುಳ್ಳಿನ ಮರವನ್ನ ಕಿತ್ತೆಸಿಯೋಕೆ ಅವತಾರ ಎತ್ತಿ ಬರಲಾರ. ಈ ಪರಿಯ ಸಮಸ್ಯೆಗೆ ನಮ್ಮನ್ನೇ ನಾವು ಎಚ್ಚರಿಸಿ, ಎಬ್ಬಿಸಿ, ಎದಿರು ನಿಂತರೆ ಮಾತ್ರ ಈ ಹೆಮ್ಮಾರಿಯ ಬುಡಕ್ಕೆ ಕೊಡಲಿ ಏಟು ಕೊಡಲು ಸಾದ್ಯ. ನವ ಭಾರತ ನಿರ್ಮಾಣದ ಹೊಸ ಕಾರ್ಯಕಲ್ಪಕ್ಕೆ ಜೊತೆ ಸೇರಿ ನಡೆವ ಪಣತೊಡುವ ಸಮಯ ಬಂದಿದೆ. ಹಾಗಾದಲ್ಲಿ ಮಾತ್ರ ಈ ಅಂಕಣದ ಮೊದಲ ಸಾಲು ಸುಳ್ಳಾಗಳು ಸಾದ್ಯ.... 

ಗಡಿಯೊಳಗಿನ ಸೈನಿಕರು ನಾವಾಗುವ...
ತಪ್ಪು ನಡೆ ಸಹಿಸದ ಸಿಡಿಲಾಗುವ...
ತಾಯಿ ಭರತೆಯ ನಗುವ ಉಳಿಸಲು,
ಎತ್ತೆತ್ತಿ ಬರುವ ಮತ್ತೆ ಅವತಾರವ... 

- ರೋಹಿತ್

Wednesday, July 7, 2010

ಕಳ್ಳ ಕನಯ್ಯ...


ಕದ್ದೆ ಮಡಿಕೆಯ ಬೆಣ್ಣೆಯ.. ಮುದ್ದು ಕೃಷ್ಣ ಎಂದರು..
ಕದ್ದೆ ಕನಸ ಕನ್ಯಾಮಣಿಗಳ.. ಕಳ್ಳ ಕೃಷ್ಣ ಎಂದು ಕರೆದರು..
 
ಅಣ್ಣನ ಹೆಸರಿಗೆ ಮಾದರಿಯಾಗಿ, ಸಾರಥಿಯಾದೆ ನೀ ಧರ್ಮಸಂಸ್ಥಾಪನೆಗೆ.. 
 ಜೀವ ಗೆಳೆಯನು ನೀನೆ..
ನಿಂತೆ ಲೋಕದ ಒಳಿತಿಗೆ, ಅವತಾರಗಳ ನೆಪದಿ.. 
 ಜಗದೋದ್ದಾರಕ ನೀನೆ.. 
ಹೆಣ್ಣ ಮನಸಿಗೆ ಪ್ರೀತಿಯ ಕಣ್ಣು, ಪಡ್ಡೆ ಹುಡುಗರ ಗುರುವೋ ನೀ..! 
ಮತ್ತೆ ಬಾ ಎತ್ತಿ ಅವತಾರವ.. 
ತೊಲಗಿಸಿ ಕಲಿಯುಗದ ಕಂಸರ.. ಹರಿಸು ಒಲವಿನ ಕೊಳಲ ದನಿ...
- ರೋಹಿತ್

Monday, June 28, 2010

ತೊದಲು ನುಡಿ....

ಅವಳದೋ ಸಾರ್ಥಕ ಬದುಕು. ನಿಸ್ವಾರ್ಥತೆಯ ಕೋಟೆಯೊಳಗಿನ ಮಮತೆಯ ಕೊಳದೊಳಗೆ ಮುಗ್ದತೆಯ ಸೌಗಂಧ ತುಂಬಿ ಬೆಳೆದ ಪ್ರೀತಿ ಪುಷ್ಪ ಅವಳು. ಸೋತು ಕುಗ್ಗಿದ, ನಗುವನ್ನೇ ಮರೆತಿಹ, ಬಾಳೋ ಆಸೆ ತೊರೆದಂತವನೂ ಕೂಡ ಎದ್ದು ನಿಂತು, ನಕ್ಕು, ಬಾಳೋ ದಾರಿಯೆಡೆಗೆ ಸರಿಯುವಂತೆ ಮಾಡೋ ಸ್ಫೂರ್ತಿ ಅವಳು. ಇಡೀ ಜೀವ ಸಂಕುಲದ ನಗುವನ್ನ ಚಿತ್ರಿಸಬಹುದಾದಂತಹ ಎರಡಕ್ಷರದ ಮಹಾಕಾವ್ಯ ಅವಳು. ಹೌದು. ಆಕೆ ಇನ್ನಾರು ಆಗಿರಲು ಸಾದ್ಯವೇ ಇಲ್ಲ... ನೋವ ಬಟ್ಟಲಿಂದಲೂ ನಗುವ ಉಣಬಡಿಸಬಲ್ಲ ಏಕೈಕ ಸೃಷ್ಠಿ 'ಅಮ್ಮಾ'.

          ಬರೆಯೋದಕ್ಕೆ ಅಂತ ಲೇಖನಿ ಹಿಡಿದರೆ ಮೊದಲು ಅ, ಆ.. ತಿದ್ದಿಸಿದ ಅಮ್ಮನ ನೆನಪಾಗೊತ್ತೆ. ಮೊದಲ ಬಾರಿಗೆ 'ಅ' ಅನ್ನೋ ಅಕ್ಷರವನ್ನ ತಪ್ಪಿಲ್ಲದೆ ಬರೆದಾಗ ಆ ನನ್ನಮ್ಮನಿಗಾದ ಸಂತೋಷದ ನೆನಪು ನನಗಿಲ್ಲದೇ ಇದ್ದರೂ, ಮಗ ಇಡೀ ಲೋಕ ಗೆದ್ದ ಸಂತೋಷ ಅವಳಲ್ಲಿ ತುಂಬಿರೊತ್ತೆ ಅಂತ ನನಗೆ ತಿಳಿದಿದೆ. ಆ ಮನಸೇ ಹಾಗೆ...! ತನಗೆ ಅಂತ ಯಾವತ್ತೂ ನಕ್ಕಿಲ್ಲ, ಏನನ್ನೂ ಬಯಸಿಲ್ಲ ಕೂಡಾ. ಅವಳ ಮಟ್ಟಿಗೆ ತನ್ನ ಕಂದಮ್ಮನೇ ಎಲ್ಲಾ. ಆಗ ತಾನೇ ನಾನು ಕಲಿತ 'ಅಮ್ಮಾ' ಎಂಬ ಪದವನ್ನು ಅ..ಮ್ಮ್....ಆ..... ಎಂದು ಚೂರು ಚೂರು ಮಾಡಿ ತೊದಲು ನುಡಿದಾಗ ಆಕೆಯ ಎದೆಯಾಳದಲ್ಲಿ ಉಕ್ಕಿದ ಸಂತಸದ ಕಡಲು ನನ್ನ ಮೇಲೆ ಮುತ್ತಾಗಿ ಎರಗಿದ್ದು ನಿಜ. ಕಣ್ಣಲ್ಲಿ ನಾನು ಎಂ.ಬಿ.ಬಿ.ಎಸ್. ಓದಿ ಡಾಕ್ಟರ್ ಆಗ್ತೀನಿ ಅನ್ನೋ ಕನಸು ಕಟ್ಟಿಕೊಂಡೆ ಬೆಳಸಿದ್ದಳು ನನ್ನ. ನಾನೋ, ಒಣ ತುಂಟ! ಕಂಡಿದ್ದೆಲ್ಲ ಬೇಕು ಅನ್ನೋ ಹಠ ಬೇರೆ.. ಕೊಟ್ಟ ಕಷ್ಟ ಒಂದಾ..ಎರಡಾ..? ಇತ್ತ ಪ್ರತಿ ನೋವಿಗೆ ಅತ್ತ ಕಡೆಯಿಂದ ಪುಟ್ಟ ನಗುವೇ ಉತ್ತರವಾಗಿರ್ತಾ ಇತ್ತು. ತೀರ್ಥಹಳ್ಳಿಯ ಬೇಗುವಳ್ಳಿಯಲಿ ಇದ್ದಾಗ ಸ್ನಾನ ಮಾಡಿಸಲು ಮೈಗೆ ಎಣ್ಣೆ ಹಚ್ಚಿ ಬಿಟ್ಟಂತಹ ಒಂದುವರೆ ವರ್ಷದ ನಾನು, ಯಾರ ಅರಿವಿಗೂ ಬಾರದೆ, ಮನೆ ಎದುರಿನ ರಸ್ತೆಯ ನಡುವೆ ಬಂದು ನಿಂತುಕೊಂಡು ಹೋಗೋ-ಬರೋ ಬಸ್ಸುಗಳಿಗೆ ಟಾ-ಟಾ ಮಾಡ್ತಿದ್ದನ್ನು ನೆನೆಸಿ ಈಗಲೂ ದಿಗಿಲಾಗುತ್ತಾಳೆ ನನ್ನಮ್ಮ. 




ತನ್ನ ಜೀವದೊಳಗೆ ನನ್ನ ಜೀವ ಹಿಡಿದು,
ನಾನಿತ್ತ ನೋವ ನವಮಾಸ ತಡೆದು,
ನೀ ಕೊಟ್ಟೆ ನನಗೆ ಈ ಜನುಮವಾ..
ಅಮ್ಮಾ.. ಈ ಜೀವ ನಿನದಲ್ಲವಾ..??



 
          ಇನ್ನೂ ನೆನಪಿದೆ, ಬ್ಯಾಟು-ಬಾಲು ಹಿಡ್ಕೊಂಡು ಕ್ರಿಕೆಟ್ ಆಡೋಕೆ ಹೋಗಿ ನನಗಿಂತ ೨-೩ ವರ್ಷ ದೊಡ್ಡೋನ ಜೊತೆ ಜಗಳ ಆಡಿ, ಮುಂಗಾರು ಮಳೆ ಸ್ಟೈಲ್ ನಲ್ಲಿ ಅವನಿಗೆ ಹೊಡೆದು!, ಏನೂ ನಡೆದಿಲ್ಲ ಅನ್ನೋ ತರ ತಣ್ಣಗೆ ಮನೆಗೆ ಬಂದು ಸೇರ್ಕೊಂಡ್ ಮೇಲೆ, ಆ ಮಹಾಶಯ ಬಂದು ಅಪ್ಪನ ಹತ್ರ ಕಂಪ್ಲೈಂಟ್ ರೆಜಿಸ್ಟರ್ ಮಾಡಿದಾಗ, ಕೈಗೆ ಸಿಕ್ಕ ತಮ್ಮ ಲಾಟಿ ನ ಅಪ್ಪ ಎತ್ಕೊಂಡಿದ್ದೆ ತಡ ಅಡುಗೆ ಮನೆಯಲ್ಲಿದ್ದವಳು ಓಡಿ ಬಂದು ನನ್ನ ತನ್ನ ಹಿಂದಕ್ಕೆ ಎಳ್ಕೊಂಡು, ಬೆಟ್ಟದಂತಹ ಪ್ರೀತಿನಾ ನನಗೆ ಶ್ರೀರಕ್ಷೆಯಾಗಿ ಹಿಡಿದಿದ್ದಳು. ಆ ಪ್ರೀತಿ ಕಂಡು ಲಾಟಿ ಗತಿ ಇಲ್ಲದೆ ತನ್ನ ಮೂಲೆ ಸೇರ್ಕೊಂಡಿತ್ತು. ಹಾಗೆ ನನ್ನ ಅಪ್ಪನ ಸಿಟ್ಟು ಕೂಡಾ!!

          ಅಮ್ಮ ಇಲ್ಲದೆ ಇದ್ರೆ ಒಂದು ಕ್ಷಣನೂ ಕೈ-ಕಾಲು ಆಡ್ತಿರ್ಲಿಲ್ಲ ನನಗೆ (ಈಗಲೂ ಕೂಡಾ). ಅವಳು ಕುಳಿತುಕೊಂಡರೆ ಸಾಕು ನಾನು ಸುಮ್ಮನೆ ಅವಳ ಪಕ್ಕಕೆ ಹೋಗಿ, ಹಾಗೇ ಅವಳ ಅಮೃತದ ಮಡಿಲಲ್ಲಿ ಮಲಗಿ, "ಅಮ್ಮಾ, ತಲೆ ಸವರಮ್ಮಾ" ಅಂತ ಹೇಳ್ತಾ ಇದ್ದೆ. ಹಾಗೇ ನಿದ್ದೆ ಹತ್ತಿದ ನನ್ನ ನಿಧಾನವಾಗಿ ಕಾಲಿನಿಂದ ದಿಂಬಿಗೆ ವರ್ಗಾಯಿಸಿ ಅಡುಗೆ ಮನೆಯೆಡೆಗೆ ಹೋಗ್ತಾ ಇರುವಾಗ ತುಟಿಯಂಚಲಿ ಸಣ್ಣಗೆ ನಕ್ಕು ತಿರುಗಿ ಮಲಗ್ತಾ ಇದ್ದೆ. ಅಂತೆಯೇ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತಿದ್ದ ಅಮ್ಮ ಮೂರು ದಿನಗಳ ಟ್ರೈನಿಂಗ್ ಗಾಗಿ ಶಿವಮೊಗ್ಗಕೆ ಹೋದಾಗ ದುಃಖ ತಾಳಲಾರದೆ ಅವಳ ಸೀರೆಯನ್ನ ಅಪ್ಪಿಕೊಂಡು ಅತ್ತಿದ್ದು ನೆನಪ ಪರಧಿಯಿಂದಾಚೆ ಹೋಗಲಾರದ ಕ್ಷಣಗಳಲ್ಲೊಂದು.



 ತಾರ ಸಾಗರದ ನಡುವೆ,
ಕಳೆದು ಹೋದೆನೆಂಬ ಭಯದಿ
ಬೆಳದಿಂಗಳ ಕೈ ಚಾಚಿ ಹಿಡಿದಪ್ಪಿದನು ತಾಯ ಒಡಲ...
ಕತ್ತಲಿದೆ ಕಂದಾ, 
ಒಡನೆ ಬರುವೆನು ನಾನು,
ಎನ್ನುತಾ ಉಕ್ಕಿತು ಮಗನೆಡೆಗೆ
ಮಮತೆಯ ಕಡಲ ಅಂತರಾಳ..



 
          ಪ್ರತಿ ಗುರುವಾರ Immunization ಅಂತ ನೂರಾರು ಮಕ್ಕಳಿಗೆ ಚುಚ್ಚುಮದ್ದು (ಇಂಜೆಕ್ಷನ್) ಕೊಡ್ತಿದ್ರೂ, ನನಗೆ ಕೊಡೋದಕ್ಕೆ ಪಕ್ಕದ ಮನೆ ಆಂಟಿ ನೇ ಆಗಬೇಕಿತ್ತು. ನಾನೋ, ಸ್ಕೂಲ್ ನಲ್ಲಿ  ಆಂಟಿ ಹತ್ರ 'ಅಮ್ಮ ಇಂಜೆಕ್ಷನ್ ಕೊಟ್ಟಿದಾರೆ' ಅಂತಲೂ, ಮನೆಯಲ್ಲಿ ಅಮ್ಮನ ಹತ್ರ 'ಸ್ಕೂಲ್ ನಲ್ಲಿ ಆಂಟಿ ಇಂಜೆಕ್ಷನ್ ಕೊಟ್ಟಿದಾರೆ' ಅಂತಲೂ ಹೇಳಿ ತಪ್ಪಿಸಿಕೊಂಡು ಕೊನೆಗೆ ಸಿಕ್ಕಿ ಬೀಳ್ತಾ ಇದ್ದೆ. ಆಗಲೂ ಸಹ ನನ್ನ ಮುದ್ದು ಅಮ್ಮ "ಪುಟ್ಟೂ..." ಎಂದು ಉದ್ಗರಿಸಿ ನಗುವಿನ ರಂಗೊಲೆಯನು ಎರೆದು, ನನ್ನ ಕೂರಿಸಿ "ಬನ್ನಿ ಸಿಸ್ಟ್ರೆ ಇಂಜೆಕ್ಷನ್ ಕೊಡಿ" ಅಂತ ಆಂಟಿ ನ ಕರೆದು ತಾನು ನೋಡೋಕಾಗದೆ ಒಳಗೆ ಸರಿಯುತಿದ್ದಳು.





ಆ ಭೂಮಿ ತಾಯಿಯೇ ನೀನಾದೆ ನನಗೆ..
ನಿನ್ನ ಬಿಂಬ ಆ ಚಂದ್ರ ಇಂದು ನಾನಾದೇ ,
ನಿನ್ನ ಸುತ್ತು ತಿರುಗುತಾ ನಿನ್ನ ಜೊತೆಗೆ ಇರುವಾಸೆ....
ಅಮವಾಸೆಯದೇ ಭಯ ಅಮ್ಮಾ ಕೇಳೆ ಎನಗೆ..! 








  
          ನಾನು ಅಪ್ಪನ ಎದುರು ಇಡೋ ಪ್ರತಿ ಬೇಡಿಕೆಗೆ ಸ್ವರವಾಗ್ತಿದ್ದೊಳು ಅಮ್ಮಾ. ಹಾಗಿದ್ದೋಳು ನಾನು PU ಸೈನ್ಸ್ ಗೋಸ್ಕರ ಹೊಸನಗರದಿಂದ ತೀರ್ಥಹಳ್ಳಿಗೆ ಬಂದು ಸೇರ್ಕೊಂಡಾಗ ತನ್ನ ಕೆಲಸಕ್ಕೆ ಸ್ವಯಂ ನಿವೃತ್ತಿ (Volunteer Retirement) ಕೊಟ್ಟು ನನ್ನ ಸಲಹೋಕೆ ನಿಂತಳು.  ಪರೀಕ್ಷೆಯ ದಿನಗಳಲ್ಲಿ ತಾನು ಅಲರಾಂ ಇಟ್ಕೊಂಡು, ಈ ಸೋಮಾರಿ ನ ಎಬ್ಬಿಸಿ, ಕಾಫಿ ಮಾಡ್ಕೊಟ್ಟು, ಪಕ್ಕದಲ್ಲೇ ಕುಳಿತ್ಕೊಂಡು ನಾನು "ಓದ್ಕೊಳ್ತಿನಿ ನೀನು ಮಲಗಮ್ಮಾ" ಎಂದಾಗಲೇ ಅಮ್ಮ ಮಲಗ್ತಿದ್ದಿದ್ದು. ಹುಟ್ಟಿದಲ್ಲಿಂದ ಇಲ್ಲಿಯವರೆಗೆ ಒಂದೇಟು ಹಾಕಿಲ್ಲ. ಮಗುವಾಗಿದ್ದಾಗ ಏನಾದರು ಕಲಿಸಲು ಅಥವಾ ಯಾವುದಾದರು ತಪ್ಪಿಗೆ ಅಪ್ಪ ಏಟು ಕೊಟ್ಟಾಗ ಮರೆಗೆ ಹೋಗಿ ಕಣ್ಣೀರಾಗುತ್ತಿದ್ದ ಅಮ್ಮಾ ಈಗಲೂ ಸಹ ನಾನೇನಾದ್ರು ಊಟ ಮಾಡದೆ/ಹುಷಾರಿಲ್ಲದೆ ಮಲಗಿದಾಗ ಕಂಬನಿ ಮಿಡಿಯುತ್ತಾಳೆ. ಬದಲಾಗದ ಅಖಂಡ ಪ್ರೀತಿಯ ಸ್ವರೂಪ ಅವಳು. 

ಎಂ.ಬಿ.ಬಿ.ಎಸ್. ಓದಿ ಡಾಕ್ಟರ್ ಆಗದೆ ಇದ್ರೂ ಪಿ.ಹೆಚ್.ಡಿ(Ph D) ಮಾಡಿ ನಿನ್ನ ಕನಸಿಗೆ ನನಸಿನ ಹಾದಿ ತೋರಿಸ್ತೀನಮ್ಮ ಅಂದಾಗ ಆ ನಿನ್ನ ಕಣ್ಣುಗಳ ಅಂಚಲ್ಲಿ ಕುಳಿತು ಇಣುಕುತ್ತಿದ್ದ ಹನಿಗಳನ್ನು ಹಾಗೇ ಮುತ್ತಾಗಿಸೋ ಆಸೆ ನನದು. ನಿನ್ನ ಬಿಸಿ ಅಪ್ಪುಗೆಯಲಿ ನನ್ನ ಕ್ಷಣಗಳನ್ನ ಕಳೆಯಬೇಕು ಎನ್ನುವ ಕನಸು ನನದು. ನಾನು ಸಾಯೋತನಕ ನಿನ್ನ ನಗುವನ್ನೇ ನೋಡಬೇಕು ಎನ್ನುವಂತಹ ಸ್ವಾರ್ಥ ನನದು. ಹಾಗೇ ನನ್ನ ಕೊನೆ ಉಸಿರನ್ನು ನಿನ್ನ ಮಡಿಲೊಳಗೆ ನಿನ್ನ ಕೈಗಳಿಂದ ನನ್ನ ತಲೆ ನೇವರಿಸಿಕೊಳ್ಳುತ್ತಾ, ನಾ ಮೊದಲ ಬಾರಿಗೆ ಚೂರು ಚೂರು ಮಾಡಿ ನುಡಿದ ಅ...ಮ್ಮಾ.... ಎಂಬ ತೊದಲು ನುಡಿಯೊಡನೆ ತೊರೆವ ಆಸೆ ನನದು...

ಜನ್ಮದಾ ಪೂರ್ವದಿಂದ ಪ್ರೀತಿಸಿದಳು..
ನಿನ್ನಾ ಪ್ರೀತಿಸಿದಳು..
ನೀ ಇತ್ತ ನೋವ ಮರೆತು,
ನವಮಾಸ ನರಕವನ್ನು ಕಳೆದಿದ್ದಳು...
ನಗುತಾ ಕಳೆದಿದ್ದಳು..
ನೀ ನಕ್ಕರೆನಗುತಾ
ನೀ ಅತ್ತರೆ ಅಳುತಾ
ಹಗಲಿರುಳು ನಿನಗೆಂದೇ ಸವೆದಿದ್ದಳು..
ನೋವ ನುಂಗಿದ್ದಳು..
ಪುಟ್ಟ ಕೈಯ ಕೈಲಿ ಹಿಡಿದು
ಅಕ್ಷರವ ತಿದ್ದಿ ಕಲಿಸಿ,
ಕೊನೆವರೆಗೂ ಕೈ ಬಿಡದೆ ನೆಡೆಸುವಳು,
ನಿನ್ನ ಏಳಿಗೆಯ ಕನಸ ಕಂಡಾ ಅವಳು...
ಜನ್ಮದಾತಲಿವಳು... ಬಾಳ ಸ್ಪೂರ್ತಿ ಅವಳು...
ನನಗವಳೇ ದೇವರು, ಹೆತ್ತವಳು...
ನನ್ನಾ ಹೆತ್ತವಳು....       

ನಿನ್ನ ಪ್ರೀತಿಯ ಕಂದ...
ಪುಟ್ಟು  
               

Friday, May 14, 2010

ಗರಿ ಬಲಿತ ಹಕ್ಕಿಗಳು ಗೂಡ ನೆನೆದಾಗ...



ಕಾತುರದಿ ಕಾದಿದ್ದ ದಿನವೊಂದು, ಕಣ್ಣೆದುರು ಬಂದು ನಿಂತು, ಕ್ಷಣದಲ್ಲಿ ಕಳೆದು ಹೋದಂತಹ ಅನುಭವ.. ೧೬ ವರುಷಗಳ ದಾರಿಯಲಿ ಜೊತೆ ನಡೆದ ಪ್ರತಿಯೊಬ್ಬರನು ಕರೆದು, ಒಂದೇ ವೇದಿಕೆಯಲ್ಲಿ ಕಾಣೋ ಆ ತವಕವನ್ನ ಆ ದಿನದ ತನಕ ಹಿಡಿದಿಟ್ಟುಕೊಂಡು ಬಂದಿದ್ದ ನೂರಾರು ಮನಕೆ, ಹರ್ಷೋಲ್ಲಾಸದ ಮಳೆ ಬೇಸಿಗೆಯಲ್ಲೂ ತಂಪೆರದಿದ್ದು ಸುಳ್ಳಲ್ಲ.. ಬೇರೆ ಬೇರೆ ದಾರಿಯೊಡನೆ ಬಂದತಹ ಎಲ್ಲರಲ್ಲಿದ್ದಿದ್ದು ಒಂದೇ ಹಸಿವು.. ಬದುಕ ಜಂಜಾಟ ತೊರೆದು, ತನ್ನವರ ಜೊತೆ ನೆಡೆದು.. ನೆನಪ ಮನೆಯೊಳಗೇ ಸರಿಯುವುದು...

ಪ್ರಪ್ರಥಮವಾಗಿ ಅಂತಹ ವೇದಿಕೆಯ ಸಿದ್ದತೆಗೆ ಕೈಜೋಡಿಸಿದ ಪ್ರತಿಯೊಬ್ಬರಿಗೂ, ಭಾಗಿಯಾದ ಪ್ರತಿಯೋರ್ವರಿಗೂ ಸ್ನೇಹಪೂರ್ವಕ ವಂದನೆಗಳು...


ಪ್ರತಿ ವೇದಿಕೆಗೂ ತನ್ನದೇ ಆದ ಆದ್ಯತೆ, ಜವಾಬ್ದಾರಿ ಇದ್ದೆ ಇರುತ್ತದೆ. ಹಾಗೆ ಈ ಒಂದು ಹಳೆ ವಿದ್ಯಾರ್ಥಿಗಳ ಸಂಘದ ಮುಖ್ಯ ಉದ್ದೇಶ ತಮ್ಮ ತಮ್ಮ ಅನಿಸಿಕೆ ವಿನಿಮಯದ ಜೊತೆಗೆ ಪರಸ್ಪರರ ಬೆಳವಣಿಗೆಗೆ ಸಹಾಯವಾಗುವಂತಹ ಕೆಲಸಗಳಿಗೆ ಮುನ್ನುಡಿ ಬರೆಯುವಂತಹ ಹೆಜ್ಜೆಯನ್ನು ಇಡುವಂತಹುದು. ಈ ಒಂದು ಉದ್ದೇಶ ಸಫಲವಾಗೋ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಅವರವರ ಜವಾಬ್ದಾರಿಯನ್ನ ಅರಿತು ನಡೆಯುವುದು ಅತ್ಯವಶ್ಯಕ.

ಒಂದು ವಿಭಾಗವಾಗಿ ಜೀವರಸಾಯನಶಾಸ್ತ್ರ ಅಥವಾ ಆಹಾರ ತಂತ್ರಜ್ಞಾನ ವಿಭಾಗಗಳು ಎಲ್ಲರಿಂದ ಬಯಸೋದು ತನ್ನ ಜೊತೆಗಿನ ನಿರಂತರ ಒಡನಾಟ, ಆ ಮೂಲಕ ತನ್ನ ಏಳಿಗೆಯೊಡನೆ ತನ್ನೆಲ್ಲಾ ಒಡನಾಡಿ(ವಿಧ್ಯಾರ್ಥಿ)ಗಳು ಯಶಸ್ಸಿನ ಹಾದಿಯಲ್ಲಿ ಸಾಗಲಿ ಎನ್ನುವುದು... ಹಾಗಾಗಿ ನಿಮ್ಮೆಲ್ಲರ ಪ್ರಾಮಾಣಿಕ ಅಭಿಪ್ರಾಯ, ಸಲಹೆ-ಸಹಕಾರ ಎಲ್ಲವೂ ಸಹ ಇಲ್ಲಿ ಅತ್ಯಮೂಲ್ಯ. ನಿಮ್ಮ ಗಮನಕ್ಕೆ ಬಂದಂತಹ ಉದ್ಯೋಗವಕಾಶಗಳು, ವಿಜ್ಞಾನದಲ್ಲಿ ಆದ ಹೊಸ ಹೊಸ ಆವಿಷ್ಕಾರಗಳು ಹಾಗೂ ಶೈಕ್ಷಣಿಕ ಬದುಕಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾಗಿರುವಂತಹ ಸಂಗತಿಗಳನ್ನು ಹಂಚಿಕೊಂಡರೆ ಅದೂ ಕೂಡಾ ವಿಜ್ಞಾನ ಕ್ಷೇತ್ರಕ್ಕೆ ತಾ ಮಾಡಿದ ಚಿಕ್ಕ ನೆರವು ಅಂತ ಅನಿಸಿಕೊಳ್ಳುತ್ತದೆ.

ಕೈ ಹಿಡಿದು ಶುರು ಮಾಡಿರುವ ನಮ್ಮ ಈ ಪ್ರಯಾಣವನ್ನ ಜೊತೆ ಬಿಡದೆ ನಡೆಸಿಕೊಂಡು ಹೋಗುವಂತಹ ಪ್ರಮಾಣವನ್ನ ನಾವೆಲ್ಲರೂ ಈಗ ಮಾಡಬೇಕಾಗಿದೆ. ಆ ರೀತಿಯಲ್ಲಿ

ನಮ್ಮ ಮನೆಯಂಗಳದಲ್ಲಿ ಕಟ್ಟಿದ
ನೆನಪಿನ ತೋರಣ ಸದಾ ಹಸಿರಾಗಿರಲಿ
ಇಟ್ಟಕನುಸುಗಳ ಚುಕ್ಕಿ, ಎರಚಿದ ಭಾವನೆಗಳ ರಂಗು
ಬಾನೆತ್ತರಕೆ ತಾಗಲಿ...


ಗರಿಬಲಿತ ಹಕ್ಕಿಗಳೇ.... ಗೂಡ ನೆನೆದು ಬಂದಿರಿ...
ನೆನಪಿನೂಟ ಸವಿದಿರಿ, ಕನಸ ಕಣ್ಣ ತೆರೆದಿರಿ...
ಕಳೆದ ಕ್ಷಣಗಳ ಕರೆದಿರಿ...

ಧನ್ಯವಾದಗಳು ನಿಮಗೆ....


ನಗು, ಯಶಸ್ಸು ಸದಾ ನಿಮ್ಮ ಹಿಂದೆ ಬರಲಿ...
ಜೊತೆ ಇರುವ ಕನಸು ನೆನಪಿನಲ್ಲಿರಲಿ....


ವಂದನೆಗಳು....

- ರೋಹಿತ್ ಕುಮಾರ್ ಹೆಚ್.ಜಿ.
Email: rohit.biogem@gmail.com
Mob: +91-9480128192

Saturday, November 21, 2009

ಸ್ನೇಹ ಸ್ಪರ್ಶ...

ಸ್ನೇಹ ಸ್ನೇಹ ಸ್ನೇಹವೇ ಸದ್ದೇ ಇರದೇ ಸ್ಪರ್ಶಿಸು,
ಒಂಟಿಯಾದ ಮನಕಿಂದು ಬಂದು ಒಮ್ಮೆ ಚುಂಬಿಸು..
ಕೋಟಿ ಕೋಟಿ ಕಷ್ಟದಲೂ
ನಿನ್ನ ಸನಿಹವೇ ಸುಖವು..
ನೀ, ಸ್ನೇಹ ಜೊತೆಗೆ ಹಾಡಲು,
ನೋವ ರಾಗ ಎಲ್ಲಿಹುದು??...

Wednesday, October 14, 2009

'ಚಿರ ಸ್ನೇಹ'

ಚಿರನೂತನ ಪ್ರತಿ ದಿನ... ಪ್ರತಿ ಹನಿಯಲು ಹೊಸತನ... 'ಚಿರ ಸ್ನೇಹ' ವೊಂದೇ, ಮನ ಮನಗಳ ಒಡನ ಬೆಸೆಯೋ ಭಾವನೆಯ ಕವನ.... --ರೋಹಿತ್

ಕಾದು ನೋಡಿ

ಹೊಸ ಅಂಕಣ...

"ತೀರ"


ಆತ್ಮೀಯ ಒಡನಾಡಿಗಳೇ,


೨೦೧೦-೨೦೧೧ ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವಿಶೇಷವಾಗಿ ಮಾಡಲ್ಪಟ್ಟ "ತೀರ" ಎಂಬ ವೀಡಿಯೋ ತುಣುಕನ್ನು ಈ ಮೂಲಕ ನಮ್ಮ ಬ್ಲಾಗ್ ನಲ್ಲಿ upload ಮಾಡುತ್ತಿದ್ದೇವೆ. ನಮ್ಮ ವಿಭಾಗದಲ್ಲಿನ ದಿನಗಳ ನೆನಪನ್ನ ಮತ್ತೆ ನಿಮ್ಮಲ್ಲಿಗೆ ತರುವಂತಹ ಒಂದು ಪುಟ್ಟ ಪ್ರಯತ್ನವು ಇದಾಗಿದ್ದು, ನಿಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ನಂಬಿದ್ದೇವೆ.


ನಿಮ್ಮ ಪ್ರತಿಯೊಂದು ಅನಿಸಿಕೆಗಳಿಗೂ ಆದರದ ಸ್ವಾಗತ.



ಈ ವೀಡಿಯೊ ತುಣುಕನ್ನು ತಯಾರಿಸಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೋರ್ವರಿಗೂ ಈ ಮೂಲಕ ಧನ್ಯವಾದವನ್ನು ಅರ್ಪಿಸುತ್ತೇವೆ.


- ರೋಹಿತ್

ತೀರ ಭಾಗ - 1

ತೀರ ಭಾಗ - 2

ತೀರ ಭಾಗ - 3

ನನ್ನ ಬೆರಳಿನೊಡನೆ ಆಡಿದ ಕನಯ್ಯ...

ನನ್ನ ಬೆರಳಿನೊಡನೆ ಆಡಿದ ಕನಯ್ಯ...